ಕನ್ನಡವೆಂಬ ಸಸ್ಯಾಹಾರಿ ಭಾಷೆ

ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಹಾಗಾಗಿ ಆಹಾರದ ವಿಷಯದಲ್ಲಿ ನಮ್ಮ ಕನ್ನಡಾಭಿಮಾನ ಸ್ವಲ್ಪ ಕಡಿಮೆಯೇ. ಇಲ್ಲಿ ನಾವು ಕನ್ನಡಾಭಿಮಾನಿಗಳಾಗಿಬಿಟ್ಟರೆ ಕೇವಲ ಮಾಂಸದ ‘ಸಾರು’, ಮಾಂಸದ ‘ಪಲ್ಯ’ ಇಲ್ಲವೇ ಮೀನಿನ ‘ಸಾರು’, ‘ಪಲ್ಯ’ಗಳನ್ನೇ ತಿನ್ನಬೇಕಾಗುತ್ತದೆ.

ಭಿ(ಭೀ?).ಪ. ಕಾಳೆಯವರು ಹಿಂದೊಮ್ಮೆ ತಮ್ಮ ವಿಲನ್ ಒಬ್ಬನಿಗೆ ‘ಮೊಟ್ಟೆ ದೋಸೆ’ಯನ್ನು ತಿನ್ನಿಸಿದ್ದರೂ ಮುಂದಿನ ದಿನಗಳಲ್ಲಿ ಎಲ್ಲರೂ ಆಮ್ಲೆಟ್ ತಿನ್ನಲು ಆರಂಭಿಸಿದ್ದರಿಂದ ನಾನಂತೂ ಕನ್ನಡದಲ್ಲಿಯೂ ಆಮ್ಲೆಟ್ ತಿನ್ನುತ್ತೇನೆ. ಆಗೀಗ ನಾಟಿ ಕೋಳಿ ತಿಂದರೂ ಸಾಮಾನ್ಯವಾಗಿ ಚಿಕನ್ ತಿನ್ನುವುದೇ ಹೆಚ್ಚು. ಆಗೀಗ ಮಂಡ್ಯ ಕಡೆಯ ಗೆಳೆಯರು ಬಾಡೂಡ, ಬಾಡಿನ ಎಸರು ದಯಪಾಲಿಸಿದರೂ ಸಾಮಾನ್ಯವಾಗಿ ನಮ್ಮದು ಇಂಗ್ಲಿಷಿನ ನಾನ್ ವೆಜ್ ಊಟ. ಹಾಸನದ ಗೆಳೆಯರು ‘ಪಿಗ್ ಮಟನ್’ ಊಟಕ್ಕೆ ಕರೆಯುವುದೂ ಇದೆ. ‘ತಂದೂರಿ ಕೋಳಿ’ಯನ್ನಂತೂ ತಿಂದದ್ದೇ ಇಲ್ಲ. ‘ತಂದೂರಿ ಚಿಕನ್’ ತಿಂದದ್ದಕ್ಕಂತೂ ಲೆಕ್ಕವೇ ಇಲ್ಲ. ಟಿಕ್ಕಾ, ಕಬಾಬ್ ಗಳನ್ನಂತೂ ಕೋಳಿ, ಆಡು, ಕುರಿಗಳ ಮಾಂಸದಿಂದ ತಯಾರಿಸುವುದೇ ಇಲ್ಲ. ಇವುಗಳ ತಯಾರಿಗೆ ಚಿಕನ್, ಮಟನ್ ಗಳೇ ಬೇಕು.ಕನ್ನಡವೇ ಉಸಿರಾಗಿರುವವರೂ ಸಿಗಡಿಯ ಬದಲಿಗೆ ಪ್ರಾನ್ ಅಥವಾ ಶ್ರಿಂಪ್ ಗಳನ್ನೇ ತಿನ್ನುತ್ತಾರೆ. ಚಿಕನ್, ಮಟನ್ ಆಸ್ವಾದಿಸುತ್ತಾರೆ. ಹುರಿಯುವ ಬದಲಿಗೆ ಫ್ರೈ ಮಾಡಿದರೂ ಯಾರೂ ಕೇಳುವುದಿಲ್ಲ.

ಹೀಗಿರುವಾಗ ಕಂಪ್ಯೂಟರನ್ನು ಮಾತ್ರ ಗಣಕಯಂತ್ರವಾಗಿಸಿ, ‘ಕಡತ’ ‘ತೆರೆ’ದು ‘ಸಂಪಾದಿಸಿ’ ‘ಉಳಿಸಿ’ ಕನ್ನಡಿಗರಿಗೆ ‘ಸಹಾಯ’ ಮಾಡಿ ‘ನಿರ್ಗಮಿಸು’ವುದಕ್ಕೆ ಏನಾದರೂ ಅರ್ಥವಿದೆಯೇ?

ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ನಾನು ಬರೆದಿದ್ದೇನೆ. ಕನ್ನಡದಲ್ಲಿ ಬರೆಯುವಾಗ ನಾವು ರೂಢಿಸಿಕೊಂಡಿರುವ ಅನಗತ್ಯ ಮಡಿವಂತಿಕೆಯೊಂದು ಅಭಿವ್ಯಕ್ತಿಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದಕ್ಕೆ ‘ಮಾಂಸದ ಸಾರು’, ‘ಮೀನಿನ ಪಲ್ಯ’ಗಳು ಒಳ್ಳೆಯ ಉದಾಹರಣೆಗಳು. ಪಲ್ಯ, ಸಾರುಗಳಂಥ ಪದಗಳು ಮಾಂಸ ಅಥವಾ ಮೀನಿನಿಂದ ತಯಾರಿಸುವ ಖಾದ್ಯಗಳನ್ನು ವಿವರಿಸಲು ಸಂಪೂರ್ಣವಾಗಿ ಸೋಲುತ್ತವೆ. ಆಶ್ಚರ್ಯ ಹುಟ್ಟಿಸುವಂತೆ ಉರ್ದು ಮತ್ತು ಇಂಗ್ಲಿಷ್ ಪದಗಳ ಸಂಕರವಾದ ‘ಚಿಕನ್ ಕಬಾಬ್’ ಕನ್ನಡಿಗರಿಗೆ ಅರ್ಥವಾಗುತ್ತದೆ.

ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಪದಕೋಶವೂ ಹೀಗೆ ಸಹಜವಾಗಿ ಬೆಳೆಯಬೇಕಿತ್ತು. ಆದರೆ ಶಿಷ್ಟ ಸಂದರ್ಭಗಳಲ್ಲಿ ನಾವು ತೋರುವ ಮಡಿವಂತಿಕೆಯಿಂದಾಗಿ ತಂತ್ರಜ್ಞಾನದ ಕುರಿತು ಚೆನ್ನಾಗಿ ತಿಳಿದುಕೊಂಡಿರುವವರೂ ಕನ್ನಡದಲ್ಲಿ ಬರೆಯಲು ಹೆದರುವಂಥ ಸ್ಥಿತಿ ಇದೆ. ಕಬಾಬ್ ನ ಸಂದರ್ಭದಲ್ಲಿ ಕೋಳಿ ಚಿಕನ್ ಆದ ಹಾಗೆ ಕಂಪ್ಯೂಟರ್ ನ ಸಂದರ್ಭದಲ್ಲಿ ಫೈಲ್ ಕಡತವಾಗದೆ ಉಳಿದರೆ ತಪ್ಪಿದೆಯೇ. ಪಾರಿಭಾಷಿಕಗಳ ಸಿಜೇರಿಯನ್ ಹೆರಿಗೆಯ ಬದಲಿಗೆ ಸಹಜ ಪ್ರಸವಕ್ಕೆ ಅನುವು ಮಾಡಿಕೊಡುವುದು ಉತ್ತಮವಲ್ಲವೇ?

ಕಬಾಬ್, ಟಿಕ್ಕಾಗಳ ಮಸಾಲೆಗೇ ಕನ್ನಡ ಜಗ್ಗಲಿಲ್ಲ. ಹಾಗಿರುವಾಗ ಕಂಪ್ಯೂಟರಿನ ಫೈಲುಗಳ ಭಾರಕ್ಕೆ ಕುಸಿಯಲು ಕನ್ನಡವೇನು ರಾಮಾಯಣಗಳ ಭಾರಕ್ಕೆ ಕುಸಿದ ಫಣಿರಾಯನೇ? ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತಮತಿಗಳಾದ ನಮಗೆ ತಂತ್ರಜ್ಞಾನ ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಲ್ಲವೇ ಅಲ್ಲ.

Re: ಕನ್ನಡವೆಂಬ ಸಸ್ಯಾಹಾರಿ ಭಾಷೆ-ಖಿಚಡಿ ಭಾಷೆ ಆಗದೇ?

>>ಆಹಾರದ ವಿಷಯದಲ್ಲಿ ನಮ್ಮ ಕನ್ನಡಾಭಿಮಾನ ಸ್ವಲ್ಪ ಕಡಿಮೆಯೇ.

ಕನ್ನಡಾಭಿಮಾನ ಎಲ್ಲಾ ವಿಷಯದಲ್ಲೂ ಕಡಿಮೆಯೇ ಎಂದ್ರೆ ಹೆಚ್ಚು ಸರಿ ಅಲ್ಲವೇ?

>>ಹೀಗಿರುವಾಗ ಕಂಪ್ಯೂಟರನ್ನು ಮಾತ್ರ >>ಗಣಕಯಂತ್ರವಾಗಿಸಿ, ‘ಕಡತ’ ‘ತೆರೆ’ದು ‘ಸಂಪಾದಿಸಿ’ ‘ಉಳಿಸಿ’ >>ಕನ್ನಡಿಗರಿಗೆ ‘ಸಹಾಯ’ ಮಾಡಿ ‘ನಿರ್ಗಮಿಸು’ವುದಕ್ಕೆ ಏನಾದರೂ ಅರ್ಥವಿದೆಯೇ?

ಬರವಣಿಗೆಯಲ್ಲಿ ಹೀಗೆ ಮಾಡುವುದರಲ್ಲಿ ಅರ್ಥವಿದೆ ಎನಿಸುತ್ತದೆ.

ಅವರವರ ಭಾವಕ್ಕೆ

ಬರೆವಣಿಗೆಯಲ್ಲಿ ಅರ್ಥವಿದೆ ಎಂಬುದು ನಿಮ್ಮ ನಿಲವು. ನನ್ನ ಮಟ್ಟಿಗೆ ಸಂವಹನ ಹೆಚ್ಚು ಮುಖ್ಯ ಅನಿಸುತ್ತದೆ. ಸಂವಹನದ ಕಾರಣಕ್ಕಾಗಿಯೇ ಭಾಷೆ ಬದಲಾಗುತ್ತಾ ಹೋಗುತ್ತದೆಯಲ್ಲವೇ? 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

ಉ: ಕನ್ನಡವೆಂಬ ಸಸ್ಯಾಹಾರಿ ಭಾಷೆ

hahaha...

neeveno haagantheeri.
namma atte avaru 'alvo subbu neen kaLsidyalla foto, adanna iLisakke barthilla nange', 'hogli browser inda kaDidu, ee goDemele aadru hacchi koDu', 'ee foto solpa tiddo, oLLe devvad thara kanella kempagide', anta helthidru.

namma mane jayalakshmi, 'subbu TV ge usiru koDo enu keLthilla' anthidru.

ಶುಕ್ರಿಯಾ

ನಮ್ಮಜ್ಜಿ ಶುಕ್ರಿಯಾ ಅನ್ನೋ ಬದಲು ಥ್ಯಾಂಕ್ಸ್ ಅನ್ನೋದನ್ನೇ ಪ್ರಿಫರ್ ಮಾಡ್ತಾರೆ. 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in

ಉ: ಕನ್ನಡವೆಂಬ ಸಸ್ಯಾಹಾರಿ ಭಾಷೆ

ಇಸ್ಮಾಯಿಲ್ ಅವರೆ,

ಕನ್ನಡದಲ್ಲಿ ಮಾಂಸಾಹಾರದ ಬಗ್ಗೆ ಹೇಳುವುದು, ಸಸ್ಯಾಹಾರಿಯಾದ ನನಗೆ ಅಷ್ಟು ತಿಳಿದಿಲ್ಲ. ಆದರೆ, ಕುಮಾರವ್ಯಾಸನ ವಿರಾಟಪರ್ವದಲ್ಲೊಂದು ಕಡೆ, ಭೀಮ ಅಡುಗೆಯವನಾಗಿರುವಾಗ, ಅಲ್ಲಿನ ಅಡುಗೆ ಮನೆಯಲ್ಲಿನ, ಅಲ್ಲಿ ಮಾಡುತ್ತಿರುವ ಬಗೆಬಗೆಯ ಅಡುಗೆಗಳ ಬಗ್ಗೆ ವರ್ಣನೆ ಇದೆ. ನೀವೊಮ್ಮೆ ಅದನ್ನು ಓದಬೇಕು! :)

-ಹಂಸಾನಂದಿ

Re: ಕನ್ನಡವೆಂಬ ಸಸ್ಯಾಹಾರಿ ಭಾಷೆ

ಕೆಲವು ಕಾಮೆಂಟುಗಳು -
೧. ಯಾವ, ಎಲ್ಲಿನ, ಪದವೇ ಆಗಲಿ ಬೇಕಾದಾಗ ಬಳಸಿ ಯೋಚನೆಗಳನ್ನು ಒಬ್ಬರಿಂದೊಬ್ಬರಿಗೆ ತಲುಪಿಸಿದರೆ ಆಯಿತು. ಹೆಚ್ಚು ಬಳಕೆಯ ಪದ ಉಳಿಯುತ್ತದೆ, ಇಲ್ಲದ್ದು ಮರೆಯಾಗುತ್ತದೆ. ಯಾರೇ ಆದರೂ ಅವರ ಇಷ್ಟದ ಪದಗಳಿಗೆ, ಶೈಲಿಗೆ ವೋಟು ಹಾಕಬಹುದು.
೨. ನುರಿತ ಬಳಕೆದಾರ, ಬೇರೆ ಬೇರೆ ಭಾಷೆಗಳ, ಮೇಲ್ನೋಟಕ್ಕೆ ಒಂದೇ ಅರ್ಥದ ಪದಗಳಿಂದ ಬೇರೆ ಬೇರೆ ಧ್ವನಿ ಹೊರಡಿಸಬಹುದು.
೩. ಭಾಷೆಯಲ್ಲಿ ಈಗಾಗಲೇ ಇರುವ ಪದಗಳ ಬಳಕೆ, ಶೈಲಿಯ ಬಳಕೆ, ಹೊಸದಕ್ಕಾಗಿ ಮಾತ್ರ ಹೊಸತನ್ನು ಬಳಸುವುದಕ್ಕಿಂತ ಒಳ್ಳೆಯದು ಎಂದು ಕಾಣುತ್ತದೆ. ಈ "ಸಾಂಪ್ರದಾಯಿಕತೆ" ಆಡುಮಾತಿಗಿಂತ ಬರವಣಿಗೆಗೆ ಹೆಚ್ಚು ಸರಿ ಇರಬಹುದು.
೪. ಈ ರೀತಿಯ ವಾದಾನುವಾದಗಳು ಪ್ರಯೋಗದ ಅಭಾವದ ಕುರುಹು. ಪ್ರಯೋಗ ಹೆಚ್ಚಾದಷ್ಟೂ, ವಿವಾದ ಕಡಿಮೆ ಆಗುತ್ತದೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.