ಇರಾನ್ನ ಖ್ಯಾತ ಚಿಂತಕ ಅಲೀ ಶರೀಅತಿ ಅವರು ತಮ್ಮ ಲೇಖನವೊಂದರಲ್ಲಿ ಈಜಿಪ್ಟ್ನ ಪಿರಾಮಿಡ್ಗಳನ್ನು ನೋಡಿದ ಅನುಭವವನ್ನು ಬರೆದಿದ್ದಾರೆ. ಪಿರಾಮಿಡ್ಗಳೆಂಬ ಅದ್ಭುತಗಳ ಬಗ್ಗೆ ಅಲ್ಲಿನ ಮಾರ್ಗದರ್ಶಿಯ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸುತ್ತಾ ಹೋಗುವ ಅವರು ಪಿರಾಮಿಡ್ ನಿರ್ಮಾಣದ ಹಿಂದಿನ ಕ್ರೌರ್ಯವನ್ನು ವಿವರಿಸುತ್ತಾರೆ. ಕೈರೋದಲ್ಲಿರುವ ಆರು ದೊಡ್ಡ ಮತ್ತು ಮೂರು ಸಣ್ಣ ಪಿರಾಮಿಡ್ಗಳ ನಿರ್ಮಾಣಕ್ಕೆ ಬಳಕೆಯಾದದ್ದು ಸುಮಾರು ಎಂಟುನೂರು ದಶ ಲಕ್ಷ ಬೃಹತ್ ಗಾತ್ರದ ಕಲ್ಲುಗಳು. ಪಿರಾಮಿಡ್ಗಳನ್ನು ನಿರ್ಮಿಸಿದ ಸ್ಥಳದಿಂದ ಸುಮಾರು 980 ಮೈಲುಗಳ ದೂರದಿಂದ ಈ ಕಲ್ಲುಗಳನ್ನು ತರಲಾಯಿತು. ಪ್ರತಿಯೊಂದು ಕಲ್ಲು ಒಂದೂವರೆಯಿಂದ ಎರಡು ಟನ್ಗಳಷ್ಟು ಭಾರವಿದೆ. ಈಗಿನಂತೆ ಕಲ್ಲುಗಳನ್ನು ಎತ್ತಿಡಲು ಕ್ರೇನುಗಳಾಗಲೀ, ಸಾಗಿಸಲು ಯಾಂತ್ರೀಕೃತ ಟ್ರಕ್ಗಳಾಗಲೀ ಇಲ್ಲದ ಆ ದಿನಗಳಲ್ಲಿ ಗುಲಾಮರನ್ನು ಬಳಸಿಕೊಂಡೇ ಇವೆಲ್ಲವನ್ನೂ ಮಾಡಲಾಯಿತು.
ಕಲ್ಲುಗಳನ್ನು ತರುವ ಕೆಲಸದಲ್ಲೇ ಎಷ್ಟೋ ಮಂದಿ ಕಲ್ಲುಗಳಡಿಗೆ ಸಿಕ್ಕಿ ಮೃತಪಟ್ಟರು. ಕಲ್ಲುಗಳನ್ನು ಎತ್ತಿ ಇಟ್ಟು ಪಿರಾಮಿಡ್ ನಿರ್ಮಿಸುವ ಕ್ರಿಯೆಯಲ್ಲಿ ಸತ್ತವರು ಅದೆಷ್ಟು ಮಂದಿಯೋ. ಅವರನ್ನೆಲ್ಲಾ ಪಿರಾಮಿಡ್ಗಳ ಪಕ್ಕದಲ್ಲೇ ಇರುವ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಪಿರಾಮಿಡ್ನ ಒಳಗಿರುವ ಮೃತ ಫರೋಅನ ಸೇವೆಗೆಂದು ಅವರನ್ನು ಪಿರಾಮಿಡ್ನ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತಂತೆ. ಸತ್ತ ಮೇಲೂ ಅವರು ಜೀತ ವಿಮುಕ್ತರಾಗಲಿಲ್ಲ!
ಇದೇನು ಕೇವಲ ಈಜಿಪ್ಟಿನ ಪಿರಾಮಿಡ್ಗಳಿಗೆ ಮಾತ್ರ ಸೀಮಿತವಾದದ್ದಲ್ಲ. ಚೀನಾದ ಮಹಾಗೋಡೆಯನ್ನು ನಿರ್ಮಿಸುವಾಗಲಂತೂ ಒಂದು ಅಡಿ ಗೋಡೆ ಒಂದು ಜೀವವನ್ನು ಬಲಿತೆಗೆದುಕೊಂಡಿದೆಯಂತೆ. ಈ ಎಲ್ಲಾ ಕ್ರೌರ್ಯಗಳು ನಡೆದದ್ದು ಪ್ರಜಾಪ್ರಭುತ್ವವೆಂಬ ಪರಿಕಲ್ಪನೆ ಜನ್ಮತಳೆಯುವ ಮೊದಲು. ರಾಜನೇ ಪ್ರತ್ಯಕ್ಷ ದೇವರಾಗಿದ್ದ ದಿನಗಳಲ್ಲಿ. ಈಗ ಕಾಲ ಬದಲಾಗಿದೆ. ರಾಜನನ್ನು ಪ್ರಜೆಯೇ ಆರಿಸುವ ದಿನಗಳಿವು. ರಾಜಕಾರಣಿಗಳೆಲ್ಲಾ ಚುನಾವಣೆಯ ದಿನಗಳಲ್ಲಿ ಜನತಾ ಜನಾರ್ದನನನ್ನು ಪೂಜಿಸುವ ಕಾಲವಿದು. ಚುನಾವಣೆಗಳ ಫಲಿತಾಂಶ ಬಂದು ಸರಕಾರ ರಚನೆಯಾದ ತಕ್ಷಣ ಜನತೆಯನ್ನು ಜನಾರ್ದನನೆಂದು ಪೂಜಿಸಿದವರೆಲ್ಲಾ ಈಜಿಪ್ಟ್ನ ಫರೋಅಗಳಾಗಿ ಬಿಡುತ್ತಾರೆ. ಫರೋಅಗಳು ಸತ್ತ ನಂತರ ಇರಬೇಕಾದ `ಭವನ’ದ ನಿರ್ಮಾಣಕ್ಕೆ ಲಕ್ಷಾಂತರ ಜನರನ್ನು ಪ್ರಾಣ ಹೋಗುವ ತನಕ ದುಡಿಸಿಕೊಂಡರು. ಅಭಿನವ ಫರೋಅಗಳು ಜನರು ಸೂರಿಲ್ಲದೆ ಸಾಯುತ್ತಿರುವ ಹೊತ್ತಿನಲ್ಲೂ ತಾವು ಅಧಿಕಾರದಲ್ಲಿರುವಷ್ಟು ದಿನ ಮಾತ್ರ ವಾಸಿಸಬೇಕಾದ ಭವನಗಳ ನವೀಕರಣಕ್ಕೆ ತೆರಿಗೆಯ ಹಣವನ್ನು ಮನ ಬಂದಂತೆ ಚೆಲ್ಲುತ್ತಿದ್ದಾರೆ.
***
ಧಾರ್ಮಿಕ ನಂಬಿಕೆಗಳಿಗೆ ಒಂದು ತರ್ಕದ ಅಗತ್ಯವಿಲ್ಲ. ಪ್ರತಿಯೊಬ್ಬನೂ ತನಗೆ ಬೇಕಾದ ಧರ್ಮವನ್ನೂ ಅದರ ನಂಬಿಕೆಗಳನ್ನೂ ಆಚರಿಸುವುದಕ್ಕೆ ಸಂವಿಧಾನ ಅವಕಾಶ ಒದಗಿಸಿದೆ. ಇದಕ್ಕೆ ಜನಪ್ರತಿನಿಧಿಯೂ ಹೊರತಲ್ಲ. ಅವನ ಈ ನಂಬಿಕೆಗಳು ಜನ ಸಾಮಾನ್ಯನ ತೆರಿಗೆಯ ಹಣವನ್ನು ವೆಚ್ಚ ಮಾಡುವ ಮಟ್ಟಕ್ಕೆ ಬೆಳೆದರೆ ಅದನ್ನು ಖಂಡಿಸಲೇ ಬೇಕಾಗುತ್ತದೆ. ಕರ್ನಾಟಕದ ಯಡಿಯೂರಪ್ಪ ಸಚಿವ ಸಂಪುಟದ ಹದಿನೇಳು ಮಂದಿ ಸಚಿವರು ತಮಗೆ ನೀಡಿರುವ ಅಧಿಕೃತ ನಿವಾಸಗಳ ನವೀಕರಣಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ಈ ವೆಚ್ಚಕ್ಕೆ ಬಹುಮುಖ್ಯ ಕಾರಣ `ವಾಸ್ತು ದೋಷ’ಗಳನ್ನು ಸರಿಪಡಿಸುವುದಂತೆ.
ಕಂದಾಯ ಸಚಿವ ಕರುಣಾಕರ ರೆಡ್ಡಿ ತೆಲುಗು ಸಿನಿಮಾ ನಟನೊಬ್ಬನ ಮನೆಯಂತೆ ತಮ್ಮ ಅಧಿಕೃತ ನಿವಾಸವನ್ನು ಬದಲಾಯಿಸಿಕೊಂಡಿದ್ದಾರೆಂಬ ಆರೋಪ ಸದನದಲ್ಲೇ ಕೇಳಿಬಂತು. ಈ ನವೀಕರಣಕ್ಕೆ ಸರಕಾರ ವೆಚ್ಚ ಮಾಡಿರುವ ಹಣ 16.58 ಲಕ್ಷ ರೂಪಾಯಿಗಳು. ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಿ. ಸುಧಾಕರ್ ಅಧಿಕೃತ ನಿವಾಸದ ನವೀಕರಣಕ್ಕೆ 14 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವ ಪಿ. ಎಂ. ನರೇಂದ್ರ ಸ್ವಾಮಿಯವರ ಮನೆಯ ನವೀಕರಣಕ್ಕೆ 12 ಲಕ್ಷ ರೂಪಾಯಿಗಳು, ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದ ನವೀಕರಣಕ್ಕೆ 11.30 ಲಕ್ಷ ರೂಪಾಯಿಗಳು ವೆಚ್ಚವಾಗಿದೆ. ಇನ್ನುಳಿದಂತೆ ಸಣ್ಣ ಕೈಗಾರಿಕಾ ಸಚಿವ ವೆಂಕಟರಮಣಪ್ಪ, ವಸತಿ ಸಚಿವ ಕೃಷ್ಣಯ್ಯ ಶೆಟ್ಟಿ, ಸಾರಿಗೆ ಸಚಿವ ಆರ್. ಅಶೋಕ್ ಅವರ ನಿವಾಸಗಳ ನವೀಕರಣಕ್ಕೆ ತಲಾ ಹತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿದೆ. ಸಭಾಧ್ಯಕ್ಷ ಜಗದೀಶ್ ಶೆಟ್ಟರ್ 9.25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿಸಿ ಅಧಿಕೃತ ನಿವಾಸವನ್ನು ನವೀಕರಿಸಿದ್ದಾರೆ. ಲೋಕೋಪಯೋಗಿ ಸಚಿವ ಸಿ. ಎಂ. ಉದಾಸಿ, ಇಂಧನ ಸಚಿವ ಈಶ್ವರಪ್ಪ, ನೀರಾವರಿ ಸಚಿವ ಗೋವಿಂದ ಕಾರಜೋಳ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವೆ ಶೋಭಾ ಕರಂದ್ಲಾಜೆಯವರು ಕ್ರಮವಾಗಿ 7.18 ಲಕ್ಷ, 6ಲಕ್ಷ, 5.35 ಲಕ್ಷ, 4 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಮನೆ ನವೀಕರಿಸಿದ್ದಾರೆ.
ಬೆಂಗಳೂರು ನಗರವೊಂದರಲ್ಲಿಯೇ 700 ಕೊಳಚೆ ಪ್ರದೇಶಗಳಿವೆ. ಇಲ್ಲಿರುವ ಗೂಡುಗಳಂಥ ಗುಡಿಸಲುಗಳಲ್ಲಿ ಲಕ್ಷಾಂತರ ಮಂದಿ ಬದುಕುತ್ತಿದ್ದಾರೆ. ಪ್ರತೀ ವರ್ಷ ಮಳೆಗಾಲದಲ್ಲಿ ಬೆಂಗಳೂರಿನಲ್ಲೇ ಕನಿಷ್ಠ ಹತ್ತು ಮಂದಿಯಾದರೂ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಗಟ್ಟಿಯಾದ ಮನೆಗಳಿಲ್ಲದೆ ಮಳೆಗಾಲದಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಬೇರೆಯೇ ಇದೆ. ತಲೆಯ ಮೇಲೊಂದು ಸೂರಿರಲಿ ಎಂಬ ಆಸೆಯಿಂದ ವರ್ಷಗಳಿಂದ ಆಶ್ರಯ ಮನೆಗಳಿಗಾಗಿ ಕಾಯುತ್ತಿರುವವರ ಸಂಖ್ಯೆಯಂತೂ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇಂಥ ಸ್ಥಿತಿಯಿರುವ ರಾಜ್ಯದ ಮಂತ್ರಿಯೊಬ್ಬ ತನ್ನ ಅಧಿಕೃತ ನಿವಾಸವನ್ನು ನವೀಕರಿಸುವುದಕ್ಕೆ ಹಲವಾರು ಲಕ್ಷಗಳನ್ನು ವ್ಯಯಿಸಿದರೆ ಆತ ಈಜಿಪ್ಟ್ನ ಕ್ರೂರ ಫರೋಅಗಳಿಗಿಂತ ಹೇಗೆ ಭಿನ್ನ?
ಸರಕಾರ ಆಶ್ರಯ, ಇಂದಿರಾ ಆವಾಜ್ನಂಥ ಯೋಜನೆಗಳ ಅಡಿಯಲ್ಲಿ ಒಂದು ಮನೆ ಕಟ್ಟುವುದಕ್ಕೆ ಬಿಡುಗಡೆ ಮಾಡುವ ಹಣ 25,000 ರೂಪಾಯಿಗಳು. ನಮ್ಮ ಮಂತ್ರಿಗಳು ಮನೆಗಳ ನವೀಕರಣಕ್ಕೆ ವೆಚ್ಚ ಮಾಡಿರುವ ದುಡ್ಡಿನಲ್ಲಿ 462 ಆಶ್ರಯ ಮನೆಗಳನ್ನು ನಿರ್ಮಿಸಬಹುದಿತ್ತು. ಗಣಿ ಉದ್ಯಮಿಯಾಗಿರುವ ಕರುಣಾಕರ ರೆಡ್ಡಿಯವರಿಗೆ ಈ ಸೂಕ್ಷ್ಮ ಅರ್ಥವಾಗದೇ ಇರುವ ಸಾಧ್ಯತೆ ಇದೆ. ಆದರೆ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್.ಯಡಿಯೂರಪ್ಪನವರಿಗೆ ಇದು ತಿಳಿದಿಲ್ಲ ಎಂದು ಭಾವಿಸಲು ಸಾಧ್ಯವೇ? ವಸತಿ ಸಚಿವ ಕೃಷ್ಣಯ್ಯನವರಿಗಂತೂ ಈ ಲೆಕ್ಕಾಚಾರ ಸರಿಯಾಗಿ ಗೊತ್ತಿರಲೇ ಬೇಕು. ವಸತಿ ಹೀನರಿಗೆ ವಸತಿ ಕಲ್ಪಿಸುವುದೇ ಅವರು ನಿರ್ವಹಿಸುವ ಖಾತೆಯ ಮುಖ್ಯ ಕೆಲಸ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ನಿರ್ವಹಿಸುತ್ತಿರುವ ಶೋಭಾ ಕರಂದ್ಲಾಜೆಯವರೂ ತಮ್ಮ ಮನೆಯ ನವೀಕರಣಕ್ಕೆ ನಾಲ್ಕು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿರುವುದು ತಮಾಷೆಯಾಗಿ ಕಾಣುತ್ತಿದೆ. ಅವರು ಮಂತ್ರಿ ಸ್ಥಾನವನ್ನು ಸ್ವೀಕರಿಸಿದ ನಂತರ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಗ್ರಾಮ ವಾಸ್ತವ್ಯ ನಡೆಸುತ್ತೇನೆ ಎಂದಿದ್ದರು. ಭವ್ಯ ಬಂಗಲೆಯಂಥ ಅಧಿಕೃತ ನಿವಾಸವನ್ನು ವಾಸಯೋಗ್ಯವಾಗಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದವರು ಹಳ್ಳಿಗಳಲ್ಲಿರುವ ಮನೆಗಳಲ್ಲಿ ಅದು ಹೇಗೆ ವಾಸ್ತವ್ಯ ಮಾಡುತ್ತಾರೋ?
***
ಅಧಿಕೃತ ನಿವಾಸದ ನವೀಕರಣಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವುದು, ವಾಸ್ತುಶಾಸ್ತ್ರದ ನಂಬಿಕೆಗಳಿಗೆ ಅನುಸಾರವಾಗಿ ಕಟ್ಟಡದ ಸ್ವರೂಪವನ್ನು ಬದಲಾಯಿಸುವುದು ಕೇವಲ ಬಿಜೆಪಿಗೆ ಮೀಸಲಾದ ಪಿಡುಗೇನೂ ಅಲ್ಲ. ದೇವರಾಜ ಅರಸು ಅವರ ಕಾಲದಿಂದಲೂ ಮಂತ್ರಿಗಳಿಗೆ ಈ ರೋಗ ಅಂಟಿಕೊಂಡಿದೆ. ಎಚ್.ಡಿ.ದೇವೇಗೌಡ ಮತ್ತು ಎಸ್.ಎಂ.ಕೃಷ್ಣ ಅವರ ಆಡಳಿತಾವಧಿ ಈ ನವೀಕರಣಗಳ ಉಚ್ಛ್ರಾಯ ಕಾಲ ಎನ್ನಬಹುದು. ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ನವೀಕರಣಕ್ಕೆ ಎಸ್. ಎಂ. ಕೃಷ್ಣ ವೆಚ್ಚ ಮಾಡಿದ ಹಣದಲ್ಲಿ ಇನ್ನೂರು ಆಶ್ರಯ ಮನೆಗಳನ್ನು ನಿರ್ಮಿಸಬಹುದಿತ್ತು. ಧರ್ಮಸಿಂಗ್, ಕುಮಾರಸ್ವಾಮಿ ಕೂಡಾ ಇದೇ ಪರಂಪರೆಯನ್ನು ಮುಂದುವರಿಸಿದ್ದರು. ಈಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ಈ ಪರಂಪರೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಈ `ಪ್ರತಿನಿಧಿ’ಗಳಿಗೆ ಜನರ ಮೇಲೆ ನಂಬಿಕೆ ಇಲ್ಲ ಎಂಬುದನ್ನಂತೂ ಅವರ `ನಂಬಿಕೆ’ಗಳೇ ಸಾಬೀತು ಮಾಡುತ್ತಿವೆ.
ಜನರ ನಿರೀಕ್ಷೆಗಳಂತೆ ನಡೆದುಕೊಂಡರೆ ಅವರು ಅಧಿಕಾರ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅದು ಸಾಧ್ಯವಾಗದಿದ್ದರೆ ಯಾವ ವಾಸ್ತು ಶಾಸ್ತ್ರವೂ ಅವರ ಅಧಿಕಾರವನ್ನು ಉಳಿಸುವುದಿಲ್ಲ. ಎಸ್. ಎಂ. ಕೃಷ್ಣ ಅರ್ಧ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ನಂತರವೂ ಅವರ ಅಧಿಕಾರವೇನೂ ಶಾಶ್ವತವಾಗಿ ಉಳಿಯಲಿಲ್ಲ. ವಾಸ್ತುವಿನ ಪ್ರಕಾರ ಸರಿಯಾಗಿದ್ದ ಮನೆಯಲ್ಲಿ ಇದ್ದ ಕಾರಣಕ್ಕೆ ಆರ್. ವಿ. ದೇಶಪಾಂಡೆ ಹತ್ತು ವರ್ಷ ಮಂತ್ರಿಯಾಗಿದ್ದರೆಂದು ಈಗಿನ ಮಂತ್ರಿಗಳೆಲ್ಲಾ ನಂಬುತ್ತಾರೆ. ಆದರೆ ದೇಶಪಾಂಡೆ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಚುನಾವಣೆಯಲ್ಲಿ ಸೋತರು.
***
ಯಾರ ಸೋಲಿನಿಂದ ಯಾರೂ ಪಾಠ ಕಲಿಯುವುದಿಲ್ಲ ಎಂಬುದು ರಾಜಕಾರಣದ ಮಟ್ಟಿಗೆ ಶಾಶ್ವತ ಸತ್ಯ. ಆದರೆ ಕೆಲವೊಮ್ಮೆ ಬದಲಾವಣೆ ಎಂಬುದು ಅನಿರೀಕ್ಷಿತವಾದ ಮೂಲಗಳಿಂದ ಆರಂಭವಾಗಿಬಿಡುತ್ತದೆ. ವಾಸ್ತು, ಹೋಮ, ಹವನ, ಪೂಜೆ, ಯಾಗಗಳನ್ನು ಅತಿಯಾಗಿ ನಂಬುವ ದೇವೇಗೌಡರ ಮತ್ತು ಕುಟುಂಬದವರ ನೇತೃತ್ವದಲ್ಲಿರುವ ಪಕ್ಷದ ಸದಸ್ಯ ಎಂ.ಸಿ. ನಾಣಯ್ಯ ರಾಜಕಾರಣಿಗಳು ತಮ್ಮ `ನಂಬಿಕೆ’ಗಳಿಗಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು ತಡೆಯಲು ಬೇಕಿರುವ ಖಾಸಗಿ ಮಸೂದೆಯೊಂದನ್ನು ಮಂಡಿಸಿದ್ದಾರೆ. ಅಭಿನವ ಫರೋಅಗಳ ಆಡಳಿತ ಯುಗದಲ್ಲಿ ಈ ಮಸೂದೆ ಎಂದಾದರೂ ಚರ್ಚೆಗೆ ಬರಬಹುದೇ?