Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಮುಖ್ಯಮಂತ್ರಿಗಳೇ ನೆನಪಿದೆಯೇ ನಿಮ್ಮ ಪ್ರಣಾಳಿಕೆ

Posted on January 16, 2009May 24, 2015 by Ismail

ಕರ್ನಾಟಕದ ಬಿಜೆಪಿ ಸರ್ಕಾರ ಹೆಚ್ಚು ಸುಭದ್ರವಾಗಿದೆ. ಪಕ್ಷೇತರ ಶಾಸಕರನ್ನು ಯಾರಾದರೂ ಖರೀದಿಸಿಬಿಟ್ಟರೆ ಸರ್ಕಾರ ಉರುಳಬಹುದೆಂಬ ಭಯ ಅದಕ್ಕಿಲ್ಲ. ಇನ್ನು ಮುಂದೆ ಅದಕ್ಕೆ ತಾನು ಮಾಡಿದ `ಸಂಕಲ್ಪ’ಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿಕೊಳ್ಳಲು ಇದು ಸಕಾಲ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯ ಪುಟ-62ರ ಕೊನೆಯ ಸಾಲುಗಳಲ್ಲಿರುವಂತೆ `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಹೆಚ್ಚು ಬಲಪಡಿಸುವುದು’ ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿ ಮಾಡಿರುವ ಸಂಕಲ್ಪಗಳಲ್ಲಿ ಒಂದು. ಇಂಥದ್ದೇ ಸಂಕಲ್ಪವನ್ನು 2004ರ ಲೋಕಸಭಾ ಚುನಾವಣೆಯ ಸಂದರ್ಭದ ಪ್ರಣಾಳಿಕೆಯೂ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಯುದ್ಧ ನಡೆಸುವ ಭರವಸೆಯನ್ನು ಈ ಪ್ರಣಾಳಿಕೆ ನೀಡುತ್ತದೆ. ಆ ಸಾಲುಗಳು ಹೀಗಿವೆ: `ಭಾರತದ ಅಭಿವೃದ್ಧಿ ಪಥದ ಅತಿದೊಡ್ಡ ಅಡ್ಡಿಯೆಂದರೆ ಭ್ರಷ್ಟಾಚಾರದ ಎಂದು ಬಿಜೆಪಿ ಭಾವಿಸುತ್ತದೆ. ಭ್ರಷ್ಟಾಚಾರವು ನಮ್ಮ ಸಮಾಜ ಮತ್ತು ರಾಜಕಾರಣದ ನೈತಿಕತೆಯನ್ನೇ ದುರ್ಬಲಗೊಳಿಸಿದೆ. ಬಹುಕಾಲದ ಕಾಂಗ್ರೆಸ್‌ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ. ಲಂಚ ಕೊಡದೆ ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲು ಆಗದ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕೆಂದು ಬಿಜೆಪಿ ಭಾವಿಸುತ್ತದೆ’.

ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಈ ಸಾಲುಗಳನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ಸದನದಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದನ್ನು ಕರ್ನಾಟಕ ಮರೆತಿಲ್ಲ. ಆದರೆ ಇದೇ ಯಡಿಯೂರಪ್ಪನವರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ ಎನ್ನಲಾದ ನಿರ್ಧಾರವೊಂದು ಪತ್ರಿಕೆಗಳ ಮೂಲಕ ಕನ್ನಡ ನಾಡಿಗೆ ತಿಳಿಯಿತು.
ಆ ಸುದ್ದಿ ಹೀಗಿದೆ.

`ಆದಾಯಕ್ಕೆ ಮೀರಿ ಆಸ್ತಿ ಸಂಗ್ರಹಿಸಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಸಮಾಜ ಕಲ್ಯಾಣ ಇಲಾಖೆ ಆಯುಕ್ತ… ವಿರುದ್ಧ ಶಿಸ್ತುಕ್ರಮ ಜರುಗಿಸದಿರಲು ಸರ್ಕಾರ ನಿರ್ಧರಿಸಿದೆ. ಐಎಎಸ್‌ ಅಧಿಕಾರಿ…ಅವರ ಮನೆ ಹಾಗೂ ಕಚೇರಿಗಳ ಮೇಲೆ ಕೆಲ ತಿಂಗಳ ಹಿಂದೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂಪಾಯಿಗಳ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.

`…ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಮತಗಳ ಮೇಲೆ ಕಣ್ಣು ಹಾಕಿರುವ ಸರ್ಕಾರ ಅದೇ ಜನಾಂಗಕ್ಕೆ ಸೇರಿದ ಅಧಿಕಾರಿ….ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರಲು ನಿರ್ಧರಿಸಿದೆ’

ಈ ಸುದ್ದಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಯಡಿಯೂರಪ್ಪನವರೇ ವಿವರಿಸಬೇಕು. ಭ್ರಷ್ಟಾಚಾರವನ್ನು ತಡೆಗಟ್ಟುವುದು ಮತ್ತು ಲೋಕಾಯುಕ್ತವನ್ನು ಬಲಪಡಿಸುವುದೆಂಬ ಸಂಕಲ್ಪವನ್ನು ಮಾಡಿದ್ದ ಬಿಜೆಪಿ ಪರಿಶಿಷ್ಟರ ಓಟುಗಳಿಗಾಗಿ ಭ್ರಷ್ಟ ಅಧಿಕಾರಿಯೊಬ್ಬನ ವಿರುದ್ಧ ಕ್ರಮ ಕೈಗೊಳ್ಳದಿರಲು ತೀರ್ಮಾನಿಸಿದರೆ ಅದು ಪರಿಶಿಷ್ಟ ಜಾತಿಗಳಿಗೆ ಮಾಡುವ ಅವಮಾನವಲ್ಲವೇ? ಪರಿಶಿಷ್ಟರು ತಮ್ಮ ಜಾತಿಗೆ ಸೇರಿದ ಅಧಿಕಾರಿ ಭ್ರಷ್ಟನಾಗಿದ್ದರೂ ಆತನ ವಿರುದ್ಧ ಕ್ರಮ ಕೈಗೊಳ್ಳಬಾರದೆಂದು ನಿರೀಕ್ಷಿಸುತ್ತಾರೆ ಎಂದು ಸರ್ಕಾರ ಹೇಳಿದಂತಾಗಲಿಲ್ಲವೇ? ಪರಿಶಿಷ್ಟರನ್ನು ಒಟ್ಟಾಗಿ ಅಥವಾ ಪರಿಶಿಷ್ಟ ಪಟ್ಟಿಯಲ್ಲಿರುವ ಯಾವುದಾದರೊಂದು ಜಾತಿಯನ್ನು ಪ್ರತಿನಿಧಿಸುವ ಯಾವುದಾದರೊಂದು ಸಂಘಟನೆ ತಮ್ಮ ಜಾತಿಗೆ/ಜಾತಿಗಳಿಗೆ ಸೇರಿದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಕೇಳಿಕೊಂಡಿದೆಯೇ?

***

`ಬಹುಕಾಲದ ಕಾಂಗ್ರೆಸ್‌ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ.’ ಎಂಬುದು ಬಿಜೆಪಿಯ ನಿಲುವು. ಇದನ್ನು ಸರಿಪಡಿಸುವುದಕ್ಕೆ `ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕು’ ಎಂದು ಬಿಜೆಪಿ ಭಾವಿಸುತ್ತದೆ. ಈ `ಎಲ್ಲಾ ಹಂತಗಳಲ್ಲಿ’ ಮುಖ್ಯಮಂತ್ರಿಗಳ ನೇತೃತ್ವದಲ್ಲಿರುವ ಸಚಿವ ಸಂಪುಟದ ಹಂತ ಒಳಗೊಂಡಿಲ್ಲವೇ ಎಂಬುದು ಈಗಿನ ಸಮಸ್ಯೆ.

ಈ ಮೊದಲು ಕಾಂಗ್ರೆಸ್‌, ಜೆಡಿಎಸ್‌ಗಳ ಆಡಳಿತಾವಧಿಯಲ್ಲಿ ಭ್ರಷ್ಟಾಚಾರವಿತ್ತೆಂಬುದು ಎಲ್ಲರಿಗೂ ಗೊತ್ತಿದೆ. ಮಠಾಧೀಶರಿಗೆ ನೋವಾಗುತ್ತದೆ ಎಂಬ ಕಾರಣಕ್ಕಾಗಿ ಒಬ್ಬ ಭ್ರಷ್ಟ ಕೆಎಎಸ್‌ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಲಿಲ್ಲ. ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಐಎಎಸ್‌ಗೆ ಬಡ್ತಿಯೂ ದೊರೆಯಿತು. ಮಲ್ಲಿಕಾರ್ಜುನ ಖರ್ಗೆಯವರ ಆಶೀರ್ವಾದದಿಂದ ಸೊಗಸುಗಾರ ಐಎಎಸ್‌ ಅಧಿಕಾರಿಯೊಬ್ಬರು ಎಷ್ಟೆಷ್ಟು ಹಗರಣಗಳಲ್ಲಿ ಸಿಕ್ಕಿಬಿದ್ದರೂ ಬಚಾವ್‌ ಆದರು ಎಂಬ ಕತೆಯೊಂದು ಜನಜನಿತವಾಗಿದೆ. ರಾಮಕೃಷ್ಣ ಹೆಗಡೆಯವರು ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದರೂ ಲೋಕಾಯುಕ್ತರಿಗೆ ಬಲಗೈಯಲ್ಲಿ ಕೊಟ್ಟ ಅಧಿಕಾರವನ್ನು ಎಡಗೈಯಲ್ಲಿ ಕಿತ್ತುಕೊಂಡದ್ದೂ ಕರ್ನಾಟಕದ ಜನತೆಗೆ ನೆನಪಿದೆ. ಇವರೆಲ್ಲರ ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು ಎಂದು ಹೇಳುತ್ತಿದ್ದ ಬಿಜೆಪಿ ತಾನು ಆಡಳಿತದಲ್ಲಿದ್ದಾಗಲೂ ಅದನ್ನೇ ಮುಂದುವರಿಸುತ್ತಿದೆಯೇ ಎಂಬ ಸಂಶಯ ಈಗ ಜನರನ್ನು ಕಾಡುತ್ತಿದೆ.

ಜನರ ಈ ಸಂಶಯಕ್ಕೆ ಕಾರಣಗಳೇನು ಎಂಬುದನ್ನು ಸಕಲ ಮಾಹಿತಿಗಳನ್ನೂ ತಾವು ಕುಳಿತಲ್ಲಿಗೇ ತರಿಸಿಕೊಳ್ಳುವ ಸಾಮರ್ಥ್ಯವಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿವರಿಸಬೇಕಿಲ್ಲ. ಆದರೂ ಸಾಂದರ್ಭಿಕವಾಗಿ ಕೆಲವು ವಿಷಯಗಳನ್ನು ಇಲ್ಲಿ ಹೇಳಲೇಬೇಕಾಗಿದೆ. ಭ್ರಷ್ಟ ಅಧಿಕಾರಿಯೊಬ್ಬನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದೇ ಇರಲು ತೀರ್ಮಾನಿಸಿದ ತಕ್ಷಣ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅದರಲ್ಲಿ ಮುಖ್ಯವಾದುದು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದರಿಂದ ಸರ್ಕಾರಕ್ಕೆ ಅರ್ಥಾತ್‌ ಮುಖ್ಯಮಂತ್ರಿಗಳಾದಿಯಾಗಿ ಇರುವ ಆಡಳಿತಾರೂಢ ರಾಜಕಾರಣಿಗಳಿಗೆಲ್ಲರಿಗೂ ಆಗುವ ಲಾಭವೇನು?
ಈ ಪ್ರಶ್ನೆಯ ಸಂಭವನೀಯ ಉತ್ತರ ಹೀಗಿರಬಹುದು. ಭ್ರಷ್ಟ ಅಧಿಕಾರಿ ತಾನು ಗಳಿಸಿದ್ದರಲ್ಲಿ ಒಂದು ಪಾಲನ್ನು ತನ್ನ ಇಲಾಖೆಯ ಮಂತ್ರಿಗೆ ನೀಡುತ್ತಿದ್ದ. ಆ ಮಂತ್ರಿಯ ಮೂಲಕ ಅದು ಮುಖ್ಯಮಂತ್ರಿಗಳನ್ನೂ ತಲುಪುತ್ತದೆ. ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆದೇಶಿಸಿದರೆ ಆತ ತಾನು ಸಂಪಾದಿಸಿ ಯಾರಿಗೆಲ್ಲಾ ಪಾಲು ನೀಡುತ್ತಿದ್ದೆ ಎಂಬುದನ್ನು ವಿವರಿಸಬಹುದು. ಈ ವಾಸ್ತವವನ್ನು ಮುಚ್ಚಿಡುವುದಕ್ಕಾಗಿ ಆತನ ವಿರುದ್ಧ ಕ್ರಮ ಜರುಗಿಸದೇ ಇರಲು ಸರ್ಕಾರ ನಿರ್ಧರಿಸಿದೆ.

ಈ ಸಂಭವನೀಯ ಉತ್ತರ ತಮ್ಮ ಸರ್ಕಾರಕ್ಕೆ ಅನ್ವಯಿಸುವುದಿಲ್ಲ ಎಂಬುದನ್ನು ತಾರ್ಕಿಕವಾಗಿ ಸಾಬೀತು ಮಾಡುವ ತನಕವೂ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಜನರು ಅನುಮಾನದ ಕಣ್ಣಿನಿಂದಲೇ ನೋಡುತ್ತಾರೆ. ಈ ಹಿಂದಿನ ಉದಾಹರಣೆಗಳು ಅನುಮಾನವನ್ನು ಬಲಪಡಿಸುತ್ತಲೇ ಇರುತ್ತವೆ. ಇಲ್ಲಿಯ ತನಕ ಆದಾಯ ಮೀರಿದ ಆಸ್ತಿಯನ್ನು ಗಳಿಸಿ ಲೋಕಾಯುಕ್ತರ ದಾಳಿಗೆ ಗುರಿಯಾದ ಯಾರ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. `ಭ್ರಷ್ಟಾಚಾರದ ವಿರುದ್ಧ ಎಲ್ಲಾ ಹಂತಗಳಲ್ಲಿಯೂ ಹೋರಾಡುವ’ ಭರವಸೆ ನೀಡಿದ್ದ ಬಿಜೆಪಿ ಸರ್ಕಾರ ಇದನ್ನು ಮಾಡದೇ ಹೋದರೆ ಅದೂ ಇತರ ಸರ್ಕಾರಗಳಂತೆಯೇ ಭ್ರಷ್ಟ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ.

ಭ್ರಷ್ಟಾಚಾರದ ವಿರುದ್ಧ ಬೀದಿಯಲ್ಲೂ ಸದನದಲ್ಲೂ ಏಕಪ್ರಕಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಭ್ರಷ್ಟ ಅಧಿಕಾರಿಗಳಿಗೆ ಇನ್ನು ಬಲವಿಲ್ಲ ಎಂದು ಜನರು ನಂಬಿದ್ದರು. ಆದರೆ ಅವರೂ ತಾವೇ ಟೀಕಿಸುತ್ತಿದ್ದ ಸರ್ಕಾರಗಳ ಹಾದಿಯಲ್ಲೇ ಮುಂದುವರಿಯುವುದಕ್ಕೆ ನಾಚಿಕೆಯನ್ನೂ ಪಡುತ್ತಿಲ್ಲ ಎಂಬುದನ್ನು ಮಾಧ್ಯಮ ವರದಿಗಳು ಹೇಳುತ್ತಿವೆ. ಆದ್ದರಿಂದ ಅವರಿಗೆ ಬಿಜೆಪಿ ಪ್ರಣಾಳಿಕೆಯ 62ನೇ ಪುಟವನ್ನು ಮತ್ತೆ ನೆನಪಿಸಬೇಕಾಗಿ ಬಂದಿದೆ.

January 2009
M T W T F S S
 1234
567891011
12131415161718
19202122232425
262728293031  
« Oct   Feb »
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme