Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

Category: ಒಂಟಿದನಿ (ಉದಯವಾಣಿ ಅಂಕಣ)

ಭಿನ್ನಮತದ ದ್ರವೀಕರಣ ಸಾಧ್ಯತೆಯು

Posted on June 12, 2009May 24, 2015 by Ismail

ಯಡಿಯೂರಪ್ಪನವರದ್ದು ಹಲ ಬಗೆಯ ಸಾಧನೆ. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂಥ ನಾಯಕತ್ವ ನೀಡಿದ್ದು ಅವರ ಮೊದಲ ಸಾಧನೆ. ವಿವಿಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆಳೆದುಕೊಂಡು ಬಂದು ಉಪ ಚುನಾವಣೆಗೆ ಕಾರಣರಾಗಿ ಆ ಸ್ಥಾನಗಳಲ್ಲಿ ಹೆಚ್ಚಿನವನ್ನು ಗೆದ್ದುಕೊಂಡದ್ದೂ ಯಡಿಯೂರಪ್ಪ ನವರ ಸಾಧನೆಯೇ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟದ್ದೂ ಅವರ ಮತ್ತೊಂದು ಸಾಧನೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸರ್ಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲೇ ಭಿನ್ನಮತದ ಉದ್ಘಾಟನೆ. ಭಿನ್ನಮತವೆಂಬುದು ಎಲ್ಲಾ ಸರ್ಕಾರಗಳಲ್ಲೂ ಇತ್ತು. ಆದರೆ ಇದು ಆರಂಭವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳ ಅವಧಿಯಾದರೂ ಬೇಕಿತ್ತು. ಯಡಿಯೂರಪ್ಪನವರ ಸರ್ಕಾರ ಈ ವಿಷಯದಲ್ಲೂ ಮುಂದಿದೆ!

ಉಗ್ರ ಹೇಳಿಕೆಗಳಿಗೆ ಖ್ಯಾತರಾಗಿದ್ದ ಇಂಧನ ಸಚಿವ ಕೆ.ಎಸ್‌. ಈಶ್ವರಪ್ಪನವರು ಜೂನ್‌ ಒಂದನೇ ತಾರೀಕಿನಂದು ಶಿವಮೊಗ್ಗದಲ್ಲಿ `ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸ ಬೇಕು’ ಎಂದು ಗುಡುಗಿದ್ದರು. ಅವರು ತಮ್ಮ ಹೇಳಿಕೆಯನ್ನು ಕೇವಲ `ತನಿಖೆ’ಗೆ ಮಾತ್ರ ಸೀಮಿತಗೊಳಿಸದೆ `ಹತ್ತೊಂಬತ್ತು ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು. ಆದರೆ ಈ ಗೆಲುವು ಯಾವರೂಪದಲ್ಲಿ ಲಭಿಸಿದೆ’ ಎಂಬ ನೈತಿಕ ಪ್ರಶ್ನೆಯನ್ನೂ ಎತ್ತಿದ್ದರು. ಈಶ್ವರಪ್ಪನವರು ರಾಜ್ಯ ಬಿಜೆಪಿಯ ಸಣ್ಣ ನಾಯಕರೇನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು, ಯಾರಿಗೆ ಟಿಕೆಟ್‌ ನೀಡಬಾರದು ಎಂಬುದನ್ನು ನಿರ್ಧರಿಸುವ ಸಮಿತಿ ಯಲ್ಲೂ ಇದ್ದವರು. ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದವರು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ತಣ್ಣಗಿನ ಪ್ರತಿಕ್ರಿಯೆ ನೀಡಿದರಾದರೂ ಆಡಳಿತಾರೂಢ ಬಿಜೆಪಿಯೊಳಗೊಂದು ಅಗ್ನಿ ಪರ್ವತವಿರುವುದಂತೂ ಜನರಿಗೆ ತಿಳಿಯಿತು.

Read more

ಉತ್ತಮ ಆಡಳಿತವೆಂಬ ಚುನಾವಣಾ ವಿಷಯ

Posted on May 1, 2009May 24, 2015 by Ismail

ಭಾರತದ ಚುನಾವಣಾ ಇತಿಹಾಸದಲ್ಲಿ ಎರಡು ಪ್ರಮುಖ ಘೋಷಣೆ ಗಳಿವೆ. ಒಂದು ಇಂದಿರಾ ಗಾಂಧಿಯವರ ಕಾಲದ `ಗರೀಬಿ ಹಟಾವೋ’ ಮತ್ತೊಂದು ವಾಜಪೇಯಿ ಆಡಳಿತಾವಧಿಯನ್ನು ಗಮನದಲ್ಲಿಟ್ಟು ಕೊಂಡು ರೂಪಿಸಿದ `ಭಾರತ ಪ್ರಕಾಶಿಸುತ್ತಿದೆ’. ಈ ಎರಡೂ ಘೋಷಣೆ ಗಳ ಮಧ್ಯೆ ಮೂರು ದಶಕಗಳ ಅಂತರವಿದೆ. ಗರೀಬಿ ಹಟಾವೋ ಒಂದು ಕಾಲಘಟ್ಟದ ಭಾರತದ ಮನೋಭೂಮಿಕೆಯನ್ನು ಹೇಗೆ ವಶಪಡಿಸಿ ಕೊಂಡಿತೆಂದರೆ ಅವನತಿಯಂಚಿನಲ್ಲಿದ್ದ ಕಾಂಗ್ರೆಸ್‌ಗೆ ಮರುಜೀವ ದೊರೆಯಿತು. ಇಡೀ ಭಾರತದ ಮನೋಭೂಮಿಕೆಯನ್ನು ಹಿಡಿದಿಡುವ ಇಂಥದ್ದೊಂದು ಘೋಷಣೆಯನ್ನು ನೀಡುವುದಕ್ಕೆ ಈ ತನಕ ಯಾರಿಗೂ ಸಾಧ್ಯವಾಗಲಿಲ್ಲ.

ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿ ಪೂರ್ಣ ಗೊಂಡಾಗ ಬಿಜೆಪಿ ತನ್ನ ರಾಜಕಾರಣದ ಪುನರಾ ವಿಷ್ಕರಣಕ್ಕೆ ಹೊರಟಿತು. ತನ್ನ ಆಡಳಿತದ ಐದು ವರ್ಷಗಳಲ್ಲಿ ಕಾಣಿಸಿದ ಆರ್ಥಿಕತೆಯ ಉತ್ಕರ್ಷ ವನ್ನು ಗಮನದಲ್ಲಿಟ್ಟುಕೊಂಡು ಅದು `ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿತು. ಇದಕ್ಕೆ ಪ್ರತಿ ಯಾಗಿ ಕಾಂಗ್ರೆಸ್‌ ಮೂರು ದಶಕಗಳಿಗೂ ಹೆಚ್ಚು ಹಳತಾದ `ಗರೀಬಿ ಹಟಾವೋ’ದ ಪರಿಕಲ್ಪನೆಯನ್ನೇ ಸ್ವಲ್ಪ ಸುಧಾರಿಸಿ `ಆಮ್‌ ಆದ್ಮಿ’ಯ ಬಗ್ಗೆ ಮಾತನಾಡಿತು. ಎರಡೂ ಘೋಷಣೆಗಳು ಭಾರತದ ಮನೋ ಭೂಮಿಕೆಯನ್ನು ಹಿಡಿದಿಡಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸೋತಿತು. ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೇರಲಾಗದೆ ಮತ್ತೊಂದು ಮೈತ್ರಿಕೂಟ ರೂಪಿಸಿ ಸರಕಾರ ರಚಿಸಿತು.

Read more

ಕರ್ನಾಟಕ ಕಾಂಗ್ರೆಸ್‌ ಎಂಬ ಕುರುಸೇನೆ

Posted on April 20, 2009May 24, 2015 by Ismail

ನಂಬಿ ಹಿಡಿದರೆ ನದಿಯ ಮಗ ಹಗೆಯ ಅಂಬಿಗಿಟ್ಟ ಕಾಯವನು
ಸುತ ಸತ್ತ ನೆಪದಲಿ ಧನುವ ಬಿಸುಟನು ಗರಡಿಯಾಚಾರ್ಯ
ಅಂಬು ಬೆಸನವ ಬೇಡಿದರೆ ತೊಡನೆಂಬ ಛಲ ನಿನಗಾಯ್ತು
ಮೂವರ ನಂಬಿ ಕೌರವ ಕೆಟ್ಟ ಅಕಟಕಟೆಂದನಾ ಶಲ್ಯ

ಇದು ಕರ್ಣಪರ್ವ ಯಕ್ಷಗಾನ ಪ್ರಸಂಗದ ಒಂದು ಪದ್ಯ. ತಮ್ಮೆಲ್ಲಾ ಪರಾಕ್ರಮಗಳನ್ನೂ ಕೃಷ್ಣನ `ಆಪರೇಷನ್‌’ಗಳಿಗೆ ಬಲಿಕೊಟ್ಟ ಕುರುಸೇನೆಯ ಅತಿರಥ ಮಹಾರಥರ ಕುರಿತು ಶಲ್ಯ ಆಡಿಕೊಳ್ಳುವುದನ್ನು ಈ ಪದ್ಯ ವಿವರಿಸುತ್ತದೆ.

ರಣರಂಗದಲ್ಲಿ ಕುರುಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಭೀಷ್ಮ ಶಿಖಂಡಿಯನ್ನು ನೆಪವಾಗಿಟ್ಟುಕೊಂಡು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸತೊಡಗಿದ. ಮಗ ಚಿರಂಜೀವಿಯೆಂದು ತಿಳಿದಿದ್ದರೂ ಅಶ್ವತ್ಥಾಮನೆಂಬ ಆನೆ ಹತ್ಯೆಯಾದ ಸುದ್ದಿಯನ್ನು ನೆಪವಾಗಿಟ್ಟುಕೊಂಡ ದ್ರೋಣಾಚಾರ್ಯ ಯೋಗ ನಿದ್ರೆಗೆ ಪ್ರವೇಶಿಸಿಬಿಟ್ಟ. ಭೀಷ್ಮರಿರುವ ತನಕ ಯುದ್ಧರಂಗಕ್ಕೆ ಬರಲಾರನೆಂದು ಕುಳಿತಿದ್ದ ಕರ್ಣ ರಣರಂಗಕ್ಕೆ ಬಂದ ಮೇಲೆ ಕುಂತಿಗೆ ಕೊಟ್ಟ `ತೊಟ್ಟಂಬ ತೊಡಲಾರೆ’ನೆಂಬ ಭಾಷೆಗೆ ಬದ್ಧವಾಗಿ ಉಳಿದ. ಇವರನ್ನೆಲ್ಲಾ ನಂಬಿ `ಕೌರವ ಕೆಟ್ಟ’ ಎನ್ನುವ ಶಲ್ಯ ಕೂಡಾ ಕರ್ಣನ ತೊಟ್ಟ ಬಾಣವ ತೊಡದ ಪ್ರತಿಜ್ಞೆಯನ್ನು ಖಂಡಿಸಿ ರಥವಿಳಿದು ಕೌರವ ಕೆಡುವುದಕ್ಕೆ ತನ್ನ ಪಾಲನ್ನು ಸೇರಿಸುತ್ತಾನೆ.

ಚುನಾವಣಾ ಕುರುಕ್ಷೇತ್ರದಲ್ಲಿರುವ ಕರ್ನಾಟಕದ ಕಾಂಗ್ರೆಸ್‌ನ ಸ್ಥಿತಿಯೂ ಹೆಚ್ಚು ಕಡಿಮೆ ಮಹಾಭಾರತದ ಕುರುಸೇನೆಯ ಸ್ಥಿತಿಯನ್ನೇ ಹೋಲುತ್ತದೆ. ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್‌ನ ವಿರುದ್ಧವಿರುವವರೆಲ್ಲಾ ಪಾಂಡವರೆಂದೇನೂ ಭಾವಿಸಬೇಕಾಗಿಲ್ಲ. ಈ ಚುನಾವಣಾ ಕುರುಕ್ಷೇತ್ರದಲ್ಲಿ ಪಾಂಡವ ಪಕ್ಷವೇ ಇಲ್ಲ. ಇರುವವೆಲ್ಲವೂ ಕೌರವ ಪಕ್ಷಗಳೇ. ಇವುಗಳಲ್ಲಿ ಕಾಂಗ್ರೆಸ್‌ ಕೂಡಾ ಒಂದು ಅಷ್ಟೇ.

Read more

ಮೆಟ್ಟಿಲುಗಳಿಲ್ಲದ ಬಹು ಅಂತಸ್ತಿನ ಕಟ್ಟಡ

Posted on March 31, 2009May 24, 2015 by Ismail

ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಸಾಮಾನ್ಯ ರೈತನ ಮಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಆ ಮೂಲಕ ಬಿಜೆಪಿಯಲ್ಲಿ ದುಡಿದು ಪಕ್ಷವನ್ನು ಬೆಳಸುತ್ತಲೇ ತಾವೂ ಬೆಳೆದವರು. ಇದನ್ನು ಹೇಳಿಕೊಳ್ಳುವುದಕ್ಕೆ ಯಡಿಯೂರಪ್ಪನವರು ಹೆಮ್ಮೆ ಪಡುತ್ತಾರೆ. ತಮ್ಮ ರೈತ ಹೋರಾಟದ ಕಥನವನ್ನು ಜನರ ಮುಂದಿಟ್ಟೇ ಅವರು ಓಟು ಕೇಳುತ್ತಾರೆ.

ಪ್ರಧಾನಿಯಾಗಿದ್ದ ದೇವೇಗೌಡರೂ ಅಷ್ಟೇ. ಪಕ್ಷವನ್ನು ಸಂಘಟಿಸಿ, ಕಟ್ಟಿ, ಬೆಳೆಸಿ, ಒಡೆದು, ತಾವೂ ಬೆಳೆದವರು. ಈ ಪಟ್ಟಿಯನ್ನು ಬಹಳ ಉದ್ದಕ್ಕೆ ಬೆಳೆಸಬಹುದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ ಮುಂತಾದ ಅನೇಕರು ರಾಜಕೀಯ ಬದುಕಿನ ಆರಂಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದವರು. ಪಕ್ಷವನ್ನು ಕಟ್ಟುತ್ತಲೇ ತಾವು ಬೆಳೆದವರು. ಆದರೆ ಇಂದು ಕರ್ನಾಟಕದಲ್ಲಿರುವ ಯಾವುದೇ ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ಪದವಿಯ ಕನಸು ಕಾಣಬಹುದೇ? ಅದು ಬಿಡಿ ಕನಿಷ್ಠ ಶಾಸಕನ ಸ್ಥಾನದ ಕನಸನ್ನಾದರೂ ಕಾಣಲು ಸಾಧ್ಯವಿದೆಯೇ?

Read more

ತನಿಖೆ ಎಂಬ ಥಳಿಸುವಿಕೆ

Posted on March 30, 2009May 24, 2015 by Ismail

ಇದು 1985ರ ಬಿಹಾರ ಕೇಡರ್‌ನ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದ ಕತೆ.

`ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ ಕುರಿತು ವಿಚಾರಿಸುತ್ತಿದ್ದೆ. ಪ್ರತೀ ಬಾರಿ ಹೋದಾಗಲೂ ಪೊಲೀಸರು `ಇನ್ವೆಸ್ಟಿಗೇಷನ್‌ ಮಾಡುತ್ತಿದ್ದೇವೆ ಸಾರ್‌’ ಎಂದು ಯಾರಾದರೊಬ್ಬನಿಗೆ ಥಳಿಸುತ್ತಿರುತ್ತಿದ್ದರು. `ನಾನು ಠಾಣೆಗೆ ಹೋದ ದಿನ ನನ್ನನ್ನು ಮೆಚ್ಚಿಸುವುಕ್ಕೋ ಎಂಬಂತೆ ಅವರ ಥಳಿತದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಪ್ರತೀ ಬಾರಿ ಠಾಣೆಗೆ ಹೋದಾಗಲೂ ಹೊಸ ಹೊಸ `ಆರೋಪಿ’ಗಳಿಗೆ ಪೊಲೀಸರು ಥಳಿಸುತ್ತಿದ್ದರೇ ಹೊರತು ಕಳವಾದ ವಸ್ತುಗಳ ಕುರಿತು ಯಾವ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ಈ ಥಳಿಸುವಿಕೆಯನ್ನು ನೋಡಲಾಗದೆ ನಾನು ಕಳವಾದ ವಸ್ತುಗಳ ಆಸೆಯನ್ನೇ ಬಿಟ್ಟೆ’

ಇದು ಭಾರತೀಯ ಪೊಲೀಸ್‌ ವ್ಯವಸ್ಥೆಯ ಒಂದು ಸಣ್ಣ ಸ್ಯಾಂಪಲ್‌. ನಮ್ಮ ಪೊಲೀಸರ ಮಟ್ಟಿಗೆ ತನಿಖೆ ನಡೆಸುವುದೆಂದರೆ ಥಳಿಸುವುದು ಎಂದರ್ಥ.

***

ಕಳೆದ ತಿಂಗಳ (ಫೆಬ್ರವರಿ 2009) 27ರಂದು ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರ ಸುಮಾರು 34,000 ರೂಪಾಯಿ ಬೆಲೆಬಾಳುವ ಮೊಬೈಲ್‌ ಫೋನ್‌ ಒಂದು ಕಳವಾಯಿತು. ಈಗ ಮೊಬೈಲ್‌ ಫೋನ್‌ ಕಳವಾದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಕಳೆದು ಹೋದ ಮೊಬೈಲ್‌ ಫೋನ್‌ನ ಐಎಂಇಐ ಸಂಖ್ಯೆ ಅಥವಾ ಇಂಟರ್‌ ನ್ಯಾಷನಲ್‌ ಮೊಬೈಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ ನಂಬರ್‌ ಅನ್ನು ಪೊಲೀಸರಿಗೆ ಕೊಟ್ಟರೆ ಸಾಕು. ಕಳೆದು ಹೋದ ಮೊಬೈಲ್‌ ಎಲ್ಲಿ ಬಳಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಬಹುದು. ಫೋನ್‌ ಕಳೆದುಕೊಂಡ ಸಾಫ್ಟ್‌ವೇರ್‌ ಇಂಜಿನಿಯರ್‌ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನೂ ತಿಳಿಸಿದ್ದರು.

Read more

ಹರ ಕೊಲ್ಲಲ್‌ ಪರ ಕಾಯ್ವನೆ?

Posted on March 30, 2009May 24, 2015 by Ismail

ಕಳೆದ ಎರಡು ವರ್ಷಗಳಲ್ಲಿ ಬಿಹಾರದಿಂದ ಆರಂಭಿಸಿ ಕರ್ನಾಟಕದ ಹಾಸನದ ತನಕ ದಿಡೀರ್‌ ನ್ಯಾಯದಾನದ ಹಲವು ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೇವೆ. ಎರಡು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಜಿಲ್ಲೆಯ ಧೆಲ್‌ಫೋರ್ವಾ ಗ್ರಾಮದಲ್ಲಿ ಕಳವು ಆರೋಪಿಯೊಬ್ಬನನ್ನು ಬೀದಿಯಲ್ಲೇ ಭೀಕರವಾಗಿ ಥಳಿಸಿದ್ದು ಟಿ.ವಿ.ಚಾನೆಲ್‌ಗಳಲ್ಲಿ ಹಲವಾರು ಬಾರಿ ಪ್ರಸಾರವಾಗಿತ್ತು.

ಇದಾದ ಒಂದೇ ತಿಂಗಳಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್‌ನಲ್ಲಿ ಚಿನ್ನದ ಕಡಗವೊಂದನ್ನು ಕದ್ದಿದ್ದಾರೆಂಬ ಸಂಶಯದ ಮೇಲೆ 40 ವರ್ಷದ ಗರ್ಭಿಣಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಥಳಿಸಲಾಗಿತ್ತು. ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯನ್ನು ಟಿ.ವಿ.ಚಾನೆಲ್‌ ವರದಿಗಾರನೊಬ್ಬ ಚಿತ್ರೀಕರಿಸಿದ್ದರಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.

ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಮೂಕ ಸಾಕ್ಷಿಗಳಾಗಿದ್ದರು. ಬಿಹಾರದ ಘಟನೆಯ ಸಂದರ್ಭದಲ್ಲಂತೂ ಸಾರ್ವಜನಿಕರ ಥಳಿಸುವಿಕೆಯ ನಂತರ ಪೊಲೀಸರು ಆರೋಪಿಯನ್ನು ರಸ್ತೆಯಲ್ಲಿ ಎಳೆದಾಡಿದ್ದರು. ಕೇರಳದ ಘಟನೆಯಲ್ಲಿ ನಿರಪರಾಧಿ ಮಹಿಳೆ ಮತ್ತು ಆಕೆಯ ಇಬ್ಬರ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವುದರ ಬದಲಿಗೆ ಅವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ಬಗೆಯ ದಿಡೀರ್‌ ನ್ಯಾಯದಾನದ ಪ್ರಕರಣಗಳು ಬಿಹಾರದಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ದೇಶದ ಉಳಿದೆಡೆ ಇಲ್ಲ ಎಂದಲ್ಲ. ಬಸ್‌ನಿಲ್ದಾಣದಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಒಬ್ಬನ ಮೇಲೆ ಕಳ್ಳನೆಂಬ ಸಂಶಯ ಬಂದರೆ ಆತ ಜನರಿಗೆ ಕಳ್ಳರ ಮೇಲಿರುವ ಸಿಟ್ಟಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹೀಗೆ ಥಳಿತಕ್ಕೆ ಗುರಿಯಾದವರಲ್ಲಿ ಕೆಲವರು ಸ್ಥಳದಲ್ಲಿ ಮೃತಪಟ್ಟರೆ ಇನ್ನು ಕೆಲವರು ಹಲವಾರು ದಿನ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದದ್ದೂ ಇದೆ.

Read more

ಕಾನೂನು ಕೈಗೆತ್ತಿಕೊಳ್ಳುವುದೆಂದರೆ…

Posted on February 10, 2009May 24, 2015 by Ismail

 

 

ಮಂಗಳೂರಿನಲ್ಲಿ ಜನವರಿ 23ರಂದು ಪಬ್‌ ಒಂದರ ಮೇಲೆ ನಡೆದ ದಾಳಿಯ ನಂತರ `ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ’ ಎಂಬ ಹೇಳಿಕೆಯೊಂದನ್ನು ಕರ್ನಾಟಕದ ಅಧಿಕಾರಾರೂಢ ರಾಜಕಾರಣಿಗಳು ಬಹಳಷ್ಟು ಬಾರಿ ನೀಡಿದ್ದಾರೆ. ಈ ಹೇಳಿಕೆಗಳನ್ನು ನೀಡಿದವರಾಗಲೀ ಅದನ್ನು ಕೇಳಿಸಿಕೊಂಡ ನಾವಾಗಲೀ `ಕಾನೂನನ್ನು ಕೈಗೆತ್ತಿಕೊಳ್ಳುವುದು’ ಎಂಬ ಪರಿಕಲ್ಪನೆಯ ಅರ್ಥವೇನು ಎಂಬ ಬಗ್ಗೆ ಯೋಚಿಸಿಲ್ಲ.

ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಒಂದು ಸರಳ ಮತ್ತು ಸಾಮಾನ್ಯ ಉದಾಹರಣೆ ಯಾವುದು? ಸಾರ್ವಜನಿಕ ಸ್ಥಳವೊಂದರಲ್ಲಿ ಜೇಬುಗಳ್ಳನೊಬ್ಬ ಮಾಲು ಸಮೇತ ಸಿಕ್ಕಿಬೀಳುವುದನ್ನು ಇಂಥದ್ದೊಂದು ಸಂದರ್ಭವೆಂದು ಪರಿಗಣಿಸಬಹುದೇನೋ. ಜೇಬುಗಳ್ಳ ಸಿಕ್ಕಿಬಿದ್ದ ತಕ್ಷಣ ಅವನನ್ನು ಹಿಡಿದವರು ಪೊಲೀಸರನ್ನು ಕರೆಯುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಅಲ್ಲಿದ್ದವರೆಲ್ಲಾ ತಮ್ಮ ಪಾಲಿನ ಶಿಕ್ಷೆಯನ್ನು ಆತನಿಗೆ ನೀಡುತ್ತಾರೆ. ಹೀಗೆ ಸಿಕ್ಕಿಬಿದ್ದವರು `ಸಾರ್ವಜನಿಕರ ಆಕ್ರೋಶ’ಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡದ್ದೂ ಇದೆ.ಜೇಬುಗಳ್ಳನನ್ನು ಪೊಲೀಸರಿಗೆ ಒಪ್ಪಿಸಿ, ಪೊಲೀಸರು ಅವನ ಮೇಲೊಂದು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಕೊಡುವುದು ಕಾನೂನು ಬದ್ಧವಾದ ಹಾದಿ. ಇದನ್ನು ಕೈಬಿಟ್ಟು ವಿಚಾರಣೆಯೇ ಇಲ್ಲದೇ ಶಿಕ್ಷೆ ನೀಡುವ `ಗುಂಪು ನ್ಯಾಯ’ವನ್ನು ಕಾನೂನು ಕೈಗೆತ್ತಿಕೊಳ್ಳುವುದರ ಉದಾಹರಣೆಯೆನ್ನಬಹುದು.

ಮಂಗಳೂರಿನಲ್ಲಿ ಪಬ್‌ ಮೇಲೆ ನಡೆದ ದಾಳಿ ಅಥವಾ ಬಸ್‌ ಅಥವಾ ಸಾರ್ವಜನಿಕ ಪ್ರದೇಶವೊಂದರಲ್ಲಿ ಹುಡುಗ-ಹುಡುಗಿಯರು ಮಾತನಾಡುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದಾಗಲೀ ಕಾನೂನನನ್ನು ಕೈಗೆತ್ತಿಕೊಳ್ಳುವ ಕ್ರಿಯೆಯೆಂದು ಹೇಗೆ ಹೇಳುವುದು? ಪಬ್‌ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಿಗೆ ಮದ್ಯವನ್ನು ಸರಬರಾಜು ಮಾಡುವುದನ್ನೂ ಕಾನೂನು ಬಾಹಿರ ಎನ್ನುವಂತಿಲ್ಲ. ವಯಸ್ಕ ಹುಡುಗ ಮತ್ತು ಹುಡುಗಿಯರು ಒಟ್ಟಿಗೆ ಕುಳಿತು ಮದ್ಯ ಸೇವಿಸುವುದನ್ನೂ ಕಾನೂನು ನಿಷೇಧಿಸಿಲ್ಲ. ಹಾಗಿರುವಾಗ ಈ ದಾಳಿಯನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ಹೇಳಲು ಸಾಧ್ಯವೇ? ಹೀಗೆ ದಾಳಿ ನಡೆಸಿ ಹಲ್ಲೆ ಮಾಡಿದರೆ ಅದು ಕಾನೂನಿನ ಉಲ್ಲಂಘನೆಯಷ್ಟೇ ಆಗಲು ಸಾಧ್ಯ. ಭಿನ್ನ ಧರ್ಮದವರು ಅಥವಾ ಜಾತಿಯವರು ಪರಸ್ಪರ ಮಾತನಾಡಬಾರದು, ಗೆಳೆಯರಾಗಬಾರದು ಎಂಬ ಯಾವ ನಿಯಮಗಳೂ ಭಾರತದಲ್ಲಿ ಇಲ್ಲ. ಇದನ್ನು ಯಾವುದಾದರೂ ಗುಂಪು ಅಥವಾ ಸಂಘಟನೆ ವಿರೋಧಿಸಿದರೆ ಅದನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಹೇಳುವುದು ಸರಿಯೇ?

Read more

ಅನುಕೂಲಸಿಂಧು ರಾಜಕಾರಣದ ಸಂಕೇತ

Posted on January 21, 2009May 24, 2015 by Ismail

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಕೇತಿಕವಾದ ಕ್ರಿಯೆಗಳಿಗೂ ಒಂದು ಮಹತ್ವವಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಲು ಹೊರಡುವುದರಿಂದ ಆರಂಭಿಸಿ ರಾಜಧಾನಿಯ ಹೊರಗೆ ಸಂಪುಟ ಸಭೆ ಮತ್ತು ವಿಧಾನಸಭಾ ಅಧಿವೇಶನಗಳನ್ನು ನಡೆಸುವ ತನಕದ ಅನೇಕ ಕೆಲಸಗಳು ಈ ಸಾಂಕೇತಿಕ ಕ್ರಿಯೆಗಳ ಪರಿಧಿಯಲ್ಲಿ ಬರುತ್ತವೆ. ಚಾಮರಾಜ
ನಗರಕ್ಕೆ ಭೇಟಿ ನೀಡಿದವರೆಲ್ಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆ ವ್ಯಾಪಕವಾಗಿರುವಾಗ ಮುಖ್ಯಮಂತ್ರಿಯೊಬ್ಬ ಚಾಮರಾಜ ನಗರಕ್ಕೆ ಭೇಟಿ ನೀಡುವುದು ನಿಜಕ್ಕೂ ಮುಖ್ಯವಾಗುತ್ತದೆ. ರಾಜಧಾನಿಯಿಂದ ದೂರವಿರುವ ಪ್ರದೇಶವೊಂದು ಅಭಿವೃದ್ಧಿಯಿಂದಲೂ ದೂರವಿದ್ದಾಗ ಅಲ್ಲೊಂದು ವಿಧಾನಸಭಾ ಅಧಿವೇಶನ ನಡೆಸುವುದು ಇಲ್ಲವೇ ಸಂಪುಟ ಸಭೆಯನ್ನು
ನಡೆಸುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರ ತಮ್ಮ ಬಳಿಗೆ ಬಂತು ಎಂಬ ಭರವಸೆಯನ್ನು ಆ ಪ್ರದೇಶದ ಜನರಲ್ಲಿ ಮೂಡಿಸುವುದಕ್ಕೆ ಈ ಸಾಂಕೇತಿಕ ಕ್ರಿಯೆ ಸಹಾಯ ಮಾಡುತ್ತದೆ.

Read more

`ಜ್ಞಾನಾಧಾರಿತ ಆರ್ಥಿಕತೆ’ಯಲ್ಲಿ ಜ್ಞಾನದ ಪ್ರಶ್ನೆ

Posted on January 16, 2009May 24, 2015 by Ismail

ಜ್ಞಾನ ಸಮಾಜ, ಜ್ಞಾನಾಧಾರಿತ ಆರ್ಥಿಕತೆ ಎಂಬ ಪದಪುಂಜಗಳನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರಾಷ್ಟ್ರೀಯ ಜ್ಞಾನ ಆಯೋಗವಂತೂ ತನ್ನ ವರದಿಗೆ `ಜ್ಞಾನಾಧಾರಿತ ಸಮಾಜದತ್ತ’ ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಜ್ಞಾನ ಆಯೋಗ ಕೂಡ ಜ್ಞಾನಾಧಾರಿತ ಆರ್ಥಿಕತೆಯ ಬಗ್ಗೆ, ಜ್ಞಾನ ಸಮಾಜದ ಬಗ್ಗೆ ಹೇಳುತ್ತಿದೆ. ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಬೆಳೆಸುವುದರ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಕೂಡಾ ಹೇಳುತ್ತಾರೆ. ಇದೇ ಮಾತುಗಳನ್ನು ಹಣಕಾಸು ಸಚಿವರು ಇನ್ನಷ್ಟು ಸಂಕೀರ್ಣ ಪದಪುಂಜಗಳನ್ನು ಬಳಸಿ ವಿವರಿಸುತ್ತಾರೆ.
ಜ್ಞಾನ ಸಮಾಜದ ಕುರಿತಂತೆ ಯು.ಕೆ.ಯ ಸಸೆಕ್ಸ್‌ ವಿಶ್ವವಿದ್ಯಾಲಯದ ಸ್ಟೆಪ್ಸ್‌ ಕೇಂದ್ರ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಿತ್ತು. ವಿವಿಧ ವಿಷಯಗಳ ತಜ್ಞರು `ಜ್ಞಾನ ಸಮಾಜ’ವೆಂಬ ಪರಿಕಲ್ಪನೆಯ ಸುತ್ತ ಚರ್ಚೆ ನಡೆಸಿದರು. ದೇಶ-ವಿದೇಶಗಳ ತಜ್ಞರು ಭಾಗವಹಿಸಿದ್ದ `ರೌಂಡ್‌ ಟೇಬಲ್‌’ ಪರಿಕಲ್ಪನೆಯ ಸಂಕೀರ್ಣ ಸಮಸ್ಯೆಗಳನ್ನು ಚರ್ಚಿಸಿದರೆ ಮರುದಿನ ಏರ್ಪಾಡಾಗಿದ್ದ ಸಾರ್ವಜನಿಕ ಚರ್ಚೆ ಹಿಂದಿನ ದಿನದ ಚರ್ಚೆಗಳ ಸಾರವನ್ನು ಸಾರ್ವಜನಿಕ ಮಟ್ಟದಲ್ಲಿ ಚರ್ಚಾ ವಿಷಯವನ್ನಾಗಿಸಲು ಪ್ರಯತ್ನಿಸಿತು.

ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ, ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ, ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ `ಜ್ಞಾನ ಸಮಾಜ’ ಎಂದರೆ ಏನು? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ. ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು `ಜ್ಞಾನ ಸಮಾಜ’ ಎನ್ನಬಹುದು. `ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ’ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ `ಜ್ಞಾನ ಸಮಾಜ’ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ.

Read more

ಮುಖ್ಯಮಂತ್ರಿಗಳೇ ನೆನಪಿದೆಯೇ ನಿಮ್ಮ ಪ್ರಣಾಳಿಕೆ

Posted on January 16, 2009May 24, 2015 by Ismail

ಕರ್ನಾಟಕದ ಬಿಜೆಪಿ ಸರ್ಕಾರ ಹೆಚ್ಚು ಸುಭದ್ರವಾಗಿದೆ. ಪಕ್ಷೇತರ ಶಾಸಕರನ್ನು ಯಾರಾದರೂ ಖರೀದಿಸಿಬಿಟ್ಟರೆ ಸರ್ಕಾರ ಉರುಳಬಹುದೆಂಬ ಭಯ ಅದಕ್ಕಿಲ್ಲ. ಇನ್ನು ಮುಂದೆ ಅದಕ್ಕೆ ತಾನು ಮಾಡಿದ `ಸಂಕಲ್ಪ’ಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿಕೊಳ್ಳಲು ಇದು ಸಕಾಲ.

2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯ ಪುಟ-62ರ ಕೊನೆಯ ಸಾಲುಗಳಲ್ಲಿರುವಂತೆ `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಹೆಚ್ಚು ಬಲಪಡಿಸುವುದು’ ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿ ಮಾಡಿರುವ ಸಂಕಲ್ಪಗಳಲ್ಲಿ ಒಂದು. ಇಂಥದ್ದೇ ಸಂಕಲ್ಪವನ್ನು 2004ರ ಲೋಕಸಭಾ ಚುನಾವಣೆಯ ಸಂದರ್ಭದ ಪ್ರಣಾಳಿಕೆಯೂ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಯುದ್ಧ ನಡೆಸುವ ಭರವಸೆಯನ್ನು ಈ ಪ್ರಣಾಳಿಕೆ ನೀಡುತ್ತದೆ. ಆ ಸಾಲುಗಳು ಹೀಗಿವೆ: `ಭಾರತದ ಅಭಿವೃದ್ಧಿ ಪಥದ ಅತಿದೊಡ್ಡ ಅಡ್ಡಿಯೆಂದರೆ ಭ್ರಷ್ಟಾಚಾರದ ಎಂದು ಬಿಜೆಪಿ ಭಾವಿಸುತ್ತದೆ. ಭ್ರಷ್ಟಾಚಾರವು ನಮ್ಮ ಸಮಾಜ ಮತ್ತು ರಾಜಕಾರಣದ ನೈತಿಕತೆಯನ್ನೇ ದುರ್ಬಲಗೊಳಿಸಿದೆ. ಬಹುಕಾಲದ ಕಾಂಗ್ರೆಸ್‌ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ. ಲಂಚ ಕೊಡದೆ ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲು ಆಗದ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕೆಂದು ಬಿಜೆಪಿ ಭಾವಿಸುತ್ತದೆ’.

ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಈ ಸಾಲುಗಳನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ಸದನದಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದನ್ನು ಕರ್ನಾಟಕ ಮರೆತಿಲ್ಲ. ಆದರೆ ಇದೇ ಯಡಿಯೂರಪ್ಪನವರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ ಎನ್ನಲಾದ ನಿರ್ಧಾರವೊಂದು ಪತ್ರಿಕೆಗಳ ಮೂಲಕ ಕನ್ನಡ ನಾಡಿಗೆ ತಿಳಿಯಿತು.
ಆ ಸುದ್ದಿ ಹೀಗಿದೆ.

Read more

Posts navigation

  • 1
  • 2
  • 3
  • 4
  • Next
March 2023
M T W T F S S
 12345
6789101112
13141516171819
20212223242526
2728293031  
« Dec    
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme