ಯಡಿಯೂರಪ್ಪನವರದ್ದು ಹಲ ಬಗೆಯ ಸಾಧನೆ. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂಥ ನಾಯಕತ್ವ ನೀಡಿದ್ದು ಅವರ ಮೊದಲ ಸಾಧನೆ. ವಿವಿಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆಳೆದುಕೊಂಡು ಬಂದು ಉಪ ಚುನಾವಣೆಗೆ ಕಾರಣರಾಗಿ ಆ ಸ್ಥಾನಗಳಲ್ಲಿ ಹೆಚ್ಚಿನವನ್ನು ಗೆದ್ದುಕೊಂಡದ್ದೂ ಯಡಿಯೂರಪ್ಪ ನವರ ಸಾಧನೆಯೇ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟದ್ದೂ ಅವರ ಮತ್ತೊಂದು ಸಾಧನೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸರ್ಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲೇ ಭಿನ್ನಮತದ ಉದ್ಘಾಟನೆ. ಭಿನ್ನಮತವೆಂಬುದು ಎಲ್ಲಾ ಸರ್ಕಾರಗಳಲ್ಲೂ ಇತ್ತು. ಆದರೆ ಇದು ಆರಂಭವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳ ಅವಧಿಯಾದರೂ ಬೇಕಿತ್ತು. ಯಡಿಯೂರಪ್ಪನವರ ಸರ್ಕಾರ ಈ ವಿಷಯದಲ್ಲೂ ಮುಂದಿದೆ!
ಉಗ್ರ ಹೇಳಿಕೆಗಳಿಗೆ ಖ್ಯಾತರಾಗಿದ್ದ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರು ಜೂನ್ ಒಂದನೇ ತಾರೀಕಿನಂದು ಶಿವಮೊಗ್ಗದಲ್ಲಿ `ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸ ಬೇಕು’ ಎಂದು ಗುಡುಗಿದ್ದರು. ಅವರು ತಮ್ಮ ಹೇಳಿಕೆಯನ್ನು ಕೇವಲ `ತನಿಖೆ’ಗೆ ಮಾತ್ರ ಸೀಮಿತಗೊಳಿಸದೆ `ಹತ್ತೊಂಬತ್ತು ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು. ಆದರೆ ಈ ಗೆಲುವು ಯಾವರೂಪದಲ್ಲಿ ಲಭಿಸಿದೆ’ ಎಂಬ ನೈತಿಕ ಪ್ರಶ್ನೆಯನ್ನೂ ಎತ್ತಿದ್ದರು. ಈಶ್ವರಪ್ಪನವರು ರಾಜ್ಯ ಬಿಜೆಪಿಯ ಸಣ್ಣ ನಾಯಕರೇನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ಟಿಕೆಟ್ ನೀಡಬಾರದು ಎಂಬುದನ್ನು ನಿರ್ಧರಿಸುವ ಸಮಿತಿ ಯಲ್ಲೂ ಇದ್ದವರು. ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದವರು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ತಣ್ಣಗಿನ ಪ್ರತಿಕ್ರಿಯೆ ನೀಡಿದರಾದರೂ ಆಡಳಿತಾರೂಢ ಬಿಜೆಪಿಯೊಳಗೊಂದು ಅಗ್ನಿ ಪರ್ವತವಿರುವುದಂತೂ ಜನರಿಗೆ ತಿಳಿಯಿತು.