Shivam Vij compares NDA-2 with UPA-2 in scroll.in If the BJP government is going to defend all indefensible things by saying the Congress did it too, why indeed did we boot out the Congress? If the Congress victimised an IAS officer for exposing Robert Vadra’s alleged corruption, this government is not letting a lawyer become a judge…
ಸರ್ಕಾರಿ ಜಮೀನು ಕಬಳಿಕೆ ಪುರಾಣವು
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಸಮೀಪ ಒಂದು ಸ್ಮಶಾನವಿತ್ತು. ಇದನ್ನು ಸರ್ಕಾರಿ ದಾಖಲೆಗಳೂ ಸ್ಮಶಾನವೆಂದೇ ಗುರುತಿಸಿದ್ದೆವು. ಜ್ಞಾನಭಾರತಿ ಕ್ಯಾಂಪಸ್ ಆದ ಮೇಲೆ ಅದರ ಸುತ್ತಮುತ್ತೆಲ್ಲಾ ಮನೆಗಳು ಬಂದವು. ಅಲ್ಲಿ ಸ್ಮಶಾನ ಬೇಡ ಎಂಬ ಮಾತುಗಳು ಕೇಳಿಬಂದವು. ಅದನ್ನು ಬೇರೆಯೇ ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಉಪಾಯಗಳ ಕುರಿತು ಸಲಹೆಗಳೂ ಬರತೊಡಗಿದವು. ಈ ಹೊತ್ತಿಗೆ ಸರಿಯಾಗಿ ಇಬ್ಬರು ಅಲ್ಲಿರುವ ಸ್ಮಶಾನ ಭೂಮಿ ತಮ್ಮದು ಎಂದರು. ಇಬ್ಬರ ಬಳಿಯೂ ಸ್ಮಶಾನ ಅವರ ಹೆಸರಿನಲ್ಲಿ ಇರುವುದಕ್ಕೆ ದಾಖಲೆಯಾಗಿ ಪಹಣಿ ಅಥವಾ ಆರ್ಟಿಸಿಗಳಿದ್ದವು. ಇಬ್ಬರೂ…
ಎನ್ಡಿಎ-2ಕ್ಕೂ ಹಜ್ ಸಬ್ಸಿಡಿ ಬೇಕು!
ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಹಜ್ ಸಬ್ಸಿಡಿಯನ್ನು ಮುಂದಿನ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ಇಲ್ಲವಾಗಿಸಬೇಕೆಂದು ಸಂದರ್ಭದಲ್ಲಿ ನಾನು ಬರೆದ ಲೇಖನ ಇಲ್ಲಿದೆ. ಇದು ಪ್ರಜಾವಾಣಿಯ ಅಂತರಾಳ ಪುಟದಲ್ಲಿ ಪ್ರಕಟವಾಗಿತ್ತು. ಇದೇ ಸೋಮವಾರ (23 ಜೂನ್ 2014) ವಾರ್ಷಿಕ ಹಜ್ ಸಮ್ಮೇಳನದಲ್ಲಿ ಸುಷ್ಮಾ ಸ್ವರಾಜ್ ಅವರು ‘ಸುಂದರವಾದ ಉರ್ದುವಿನಲ್ಲಿ’ ಆಡಿದ ಮಾತುಗಳ ವರದಿ ಓದಿದ ಮೇಲೆ ಈ ಲೇಖನವನ್ನು ಮತ್ತೆ ಪ್ರಕಟಿಸಬಹುದು ಅನ್ನಿಸಿತು. ಆರ್ಥಿಕ ಉದಾರೀಕರಣದ ಯುಗ ಆರಂಭವಾದ ನಂತರದ ಕಾಲಘಟ್ಟದಲ್ಲಿ ಯಾವ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವಕ್ಕೂ ಸಿಗದೇ…
ಉನ್ನತ ಶಿಕ್ಷಣ: ಸುಧಾರಣೆಗೆ ಮಂತ್ರದಂಡವಿಲ್ಲ
ಉನ್ನತ ಶಿಕ್ಷಣವೆಂದರೆ ಜ್ಞಾನದ ಸೃಷ್ಟಿಗೆ ಬೇಕಾದ ತರಬೇತಿಯೇ, ಕೌಶಲ್ಯ ವೃದ್ಧಿಯೇ? ಈ ಪ್ರಶ್ನೆಗೆ ಭಾರತೀಯ ಸಂದರ್ಭದಲ್ಲಿ ಒಂದು ಸ್ಪಷ್ಟ ಉತ್ತರವಿಲ್ಲ. ಉನ್ನತ ಶಿಕ್ಷಣದ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ, ವೈದ್ಯಕೀಯ ಮತ್ತು ಮ್ಯಾನೇಜ್ಮೆಂಟ್ ಕೋರ್ಸ್ಗಳು ಕೌಶಲ್ಯ ವೃದ್ಧಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿವೆ.
ಭಿನ್ನಮತದ ದ್ರವೀಕರಣ ಸಾಧ್ಯತೆಯು
ಯಡಿಯೂರಪ್ಪನವರದ್ದು ಹಲ ಬಗೆಯ ಸಾಧನೆ. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂಥ ನಾಯಕತ್ವ ನೀಡಿದ್ದು ಅವರ ಮೊದಲ ಸಾಧನೆ. ವಿವಿಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆಳೆದುಕೊಂಡು ಬಂದು ಉಪ ಚುನಾವಣೆಗೆ ಕಾರಣರಾಗಿ ಆ ಸ್ಥಾನಗಳಲ್ಲಿ ಹೆಚ್ಚಿನವನ್ನು ಗೆದ್ದುಕೊಂಡದ್ದೂ ಯಡಿಯೂರಪ್ಪ ನವರ ಸಾಧನೆಯೇ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟದ್ದೂ ಅವರ ಮತ್ತೊಂದು ಸಾಧನೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸರ್ಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲೇ ಭಿನ್ನಮತದ ಉದ್ಘಾಟನೆ. ಭಿನ್ನಮತವೆಂಬುದು ಎಲ್ಲಾ ಸರ್ಕಾರಗಳಲ್ಲೂ ಇತ್ತು. ಆದರೆ ಇದು ಆರಂಭವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳ ಅವಧಿಯಾದರೂ ಬೇಕಿತ್ತು. ಯಡಿಯೂರಪ್ಪನವರ ಸರ್ಕಾರ ಈ ವಿಷಯದಲ್ಲೂ ಮುಂದಿದೆ!
ಉಗ್ರ ಹೇಳಿಕೆಗಳಿಗೆ ಖ್ಯಾತರಾಗಿದ್ದ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರು ಜೂನ್ ಒಂದನೇ ತಾರೀಕಿನಂದು ಶಿವಮೊಗ್ಗದಲ್ಲಿ `ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸ ಬೇಕು’ ಎಂದು ಗುಡುಗಿದ್ದರು. ಅವರು ತಮ್ಮ ಹೇಳಿಕೆಯನ್ನು ಕೇವಲ `ತನಿಖೆ’ಗೆ ಮಾತ್ರ ಸೀಮಿತಗೊಳಿಸದೆ `ಹತ್ತೊಂಬತ್ತು ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು. ಆದರೆ ಈ ಗೆಲುವು ಯಾವರೂಪದಲ್ಲಿ ಲಭಿಸಿದೆ’ ಎಂಬ ನೈತಿಕ ಪ್ರಶ್ನೆಯನ್ನೂ ಎತ್ತಿದ್ದರು. ಈಶ್ವರಪ್ಪನವರು ರಾಜ್ಯ ಬಿಜೆಪಿಯ ಸಣ್ಣ ನಾಯಕರೇನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಯಾರಿಗೆ ಟಿಕೆಟ್ ನೀಡಬಾರದು ಎಂಬುದನ್ನು ನಿರ್ಧರಿಸುವ ಸಮಿತಿ ಯಲ್ಲೂ ಇದ್ದವರು. ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದವರು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ತಣ್ಣಗಿನ ಪ್ರತಿಕ್ರಿಯೆ ನೀಡಿದರಾದರೂ ಆಡಳಿತಾರೂಢ ಬಿಜೆಪಿಯೊಳಗೊಂದು ಅಗ್ನಿ ಪರ್ವತವಿರುವುದಂತೂ ಜನರಿಗೆ ತಿಳಿಯಿತು.
ಉತ್ತಮ ಆಡಳಿತವೆಂಬ ಚುನಾವಣಾ ವಿಷಯ
ಭಾರತದ ಚುನಾವಣಾ ಇತಿಹಾಸದಲ್ಲಿ ಎರಡು ಪ್ರಮುಖ ಘೋಷಣೆ ಗಳಿವೆ. ಒಂದು ಇಂದಿರಾ ಗಾಂಧಿಯವರ ಕಾಲದ `ಗರೀಬಿ ಹಟಾವೋ’ ಮತ್ತೊಂದು ವಾಜಪೇಯಿ ಆಡಳಿತಾವಧಿಯನ್ನು ಗಮನದಲ್ಲಿಟ್ಟು ಕೊಂಡು ರೂಪಿಸಿದ `ಭಾರತ ಪ್ರಕಾಶಿಸುತ್ತಿದೆ’. ಈ ಎರಡೂ ಘೋಷಣೆ ಗಳ ಮಧ್ಯೆ ಮೂರು ದಶಕಗಳ ಅಂತರವಿದೆ. ಗರೀಬಿ ಹಟಾವೋ ಒಂದು ಕಾಲಘಟ್ಟದ ಭಾರತದ ಮನೋಭೂಮಿಕೆಯನ್ನು ಹೇಗೆ ವಶಪಡಿಸಿ ಕೊಂಡಿತೆಂದರೆ ಅವನತಿಯಂಚಿನಲ್ಲಿದ್ದ ಕಾಂಗ್ರೆಸ್ಗೆ ಮರುಜೀವ ದೊರೆಯಿತು. ಇಡೀ ಭಾರತದ ಮನೋಭೂಮಿಕೆಯನ್ನು ಹಿಡಿದಿಡುವ ಇಂಥದ್ದೊಂದು ಘೋಷಣೆಯನ್ನು ನೀಡುವುದಕ್ಕೆ ಈ ತನಕ ಯಾರಿಗೂ ಸಾಧ್ಯವಾಗಲಿಲ್ಲ.
ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಅವಧಿ ಪೂರ್ಣ ಗೊಂಡಾಗ ಬಿಜೆಪಿ ತನ್ನ ರಾಜಕಾರಣದ ಪುನರಾ ವಿಷ್ಕರಣಕ್ಕೆ ಹೊರಟಿತು. ತನ್ನ ಆಡಳಿತದ ಐದು ವರ್ಷಗಳಲ್ಲಿ ಕಾಣಿಸಿದ ಆರ್ಥಿಕತೆಯ ಉತ್ಕರ್ಷ ವನ್ನು ಗಮನದಲ್ಲಿಟ್ಟುಕೊಂಡು ಅದು `ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿತು. ಇದಕ್ಕೆ ಪ್ರತಿ ಯಾಗಿ ಕಾಂಗ್ರೆಸ್ ಮೂರು ದಶಕಗಳಿಗೂ ಹೆಚ್ಚು ಹಳತಾದ `ಗರೀಬಿ ಹಟಾವೋ’ದ ಪರಿಕಲ್ಪನೆಯನ್ನೇ ಸ್ವಲ್ಪ ಸುಧಾರಿಸಿ `ಆಮ್ ಆದ್ಮಿ’ಯ ಬಗ್ಗೆ ಮಾತನಾಡಿತು. ಎರಡೂ ಘೋಷಣೆಗಳು ಭಾರತದ ಮನೋ ಭೂಮಿಕೆಯನ್ನು ಹಿಡಿದಿಡಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಿತು. ಬಿಜೆಪಿ ನೇತೃತ್ವದ ಎನ್ಡಿಎ ಸೋತಿತು. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೇರಲಾಗದೆ ಮತ್ತೊಂದು ಮೈತ್ರಿಕೂಟ ರೂಪಿಸಿ ಸರಕಾರ ರಚಿಸಿತು.
ಕರ್ನಾಟಕ ಕಾಂಗ್ರೆಸ್ ಎಂಬ ಕುರುಸೇನೆ
ನಂಬಿ ಹಿಡಿದರೆ ನದಿಯ ಮಗ ಹಗೆಯ ಅಂಬಿಗಿಟ್ಟ ಕಾಯವನು
ಸುತ ಸತ್ತ ನೆಪದಲಿ ಧನುವ ಬಿಸುಟನು ಗರಡಿಯಾಚಾರ್ಯ
ಅಂಬು ಬೆಸನವ ಬೇಡಿದರೆ ತೊಡನೆಂಬ ಛಲ ನಿನಗಾಯ್ತು
ಮೂವರ ನಂಬಿ ಕೌರವ ಕೆಟ್ಟ ಅಕಟಕಟೆಂದನಾ ಶಲ್ಯ
ಇದು ಕರ್ಣಪರ್ವ ಯಕ್ಷಗಾನ ಪ್ರಸಂಗದ ಒಂದು ಪದ್ಯ. ತಮ್ಮೆಲ್ಲಾ ಪರಾಕ್ರಮಗಳನ್ನೂ ಕೃಷ್ಣನ `ಆಪರೇಷನ್’ಗಳಿಗೆ ಬಲಿಕೊಟ್ಟ ಕುರುಸೇನೆಯ ಅತಿರಥ ಮಹಾರಥರ ಕುರಿತು ಶಲ್ಯ ಆಡಿಕೊಳ್ಳುವುದನ್ನು ಈ ಪದ್ಯ ವಿವರಿಸುತ್ತದೆ.
ರಣರಂಗದಲ್ಲಿ ಕುರುಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಭೀಷ್ಮ ಶಿಖಂಡಿಯನ್ನು ನೆಪವಾಗಿಟ್ಟುಕೊಂಡು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸತೊಡಗಿದ. ಮಗ ಚಿರಂಜೀವಿಯೆಂದು ತಿಳಿದಿದ್ದರೂ ಅಶ್ವತ್ಥಾಮನೆಂಬ ಆನೆ ಹತ್ಯೆಯಾದ ಸುದ್ದಿಯನ್ನು ನೆಪವಾಗಿಟ್ಟುಕೊಂಡ ದ್ರೋಣಾಚಾರ್ಯ ಯೋಗ ನಿದ್ರೆಗೆ ಪ್ರವೇಶಿಸಿಬಿಟ್ಟ. ಭೀಷ್ಮರಿರುವ ತನಕ ಯುದ್ಧರಂಗಕ್ಕೆ ಬರಲಾರನೆಂದು ಕುಳಿತಿದ್ದ ಕರ್ಣ ರಣರಂಗಕ್ಕೆ ಬಂದ ಮೇಲೆ ಕುಂತಿಗೆ ಕೊಟ್ಟ `ತೊಟ್ಟಂಬ ತೊಡಲಾರೆ’ನೆಂಬ ಭಾಷೆಗೆ ಬದ್ಧವಾಗಿ ಉಳಿದ. ಇವರನ್ನೆಲ್ಲಾ ನಂಬಿ `ಕೌರವ ಕೆಟ್ಟ’ ಎನ್ನುವ ಶಲ್ಯ ಕೂಡಾ ಕರ್ಣನ ತೊಟ್ಟ ಬಾಣವ ತೊಡದ ಪ್ರತಿಜ್ಞೆಯನ್ನು ಖಂಡಿಸಿ ರಥವಿಳಿದು ಕೌರವ ಕೆಡುವುದಕ್ಕೆ ತನ್ನ ಪಾಲನ್ನು ಸೇರಿಸುತ್ತಾನೆ.
ಚುನಾವಣಾ ಕುರುಕ್ಷೇತ್ರದಲ್ಲಿರುವ ಕರ್ನಾಟಕದ ಕಾಂಗ್ರೆಸ್ನ ಸ್ಥಿತಿಯೂ ಹೆಚ್ಚು ಕಡಿಮೆ ಮಹಾಭಾರತದ ಕುರುಸೇನೆಯ ಸ್ಥಿತಿಯನ್ನೇ ಹೋಲುತ್ತದೆ. ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್ನ ವಿರುದ್ಧವಿರುವವರೆಲ್ಲಾ ಪಾಂಡವರೆಂದೇನೂ ಭಾವಿಸಬೇಕಾಗಿಲ್ಲ. ಈ ಚುನಾವಣಾ ಕುರುಕ್ಷೇತ್ರದಲ್ಲಿ ಪಾಂಡವ ಪಕ್ಷವೇ ಇಲ್ಲ. ಇರುವವೆಲ್ಲವೂ ಕೌರವ ಪಕ್ಷಗಳೇ. ಇವುಗಳಲ್ಲಿ ಕಾಂಗ್ರೆಸ್ ಕೂಡಾ ಒಂದು ಅಷ್ಟೇ.
ಮೆಟ್ಟಿಲುಗಳಿಲ್ಲದ ಬಹು ಅಂತಸ್ತಿನ ಕಟ್ಟಡ
ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಸಾಮಾನ್ಯ ರೈತನ ಮಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಆ ಮೂಲಕ ಬಿಜೆಪಿಯಲ್ಲಿ ದುಡಿದು ಪಕ್ಷವನ್ನು ಬೆಳಸುತ್ತಲೇ ತಾವೂ ಬೆಳೆದವರು. ಇದನ್ನು ಹೇಳಿಕೊಳ್ಳುವುದಕ್ಕೆ ಯಡಿಯೂರಪ್ಪನವರು ಹೆಮ್ಮೆ ಪಡುತ್ತಾರೆ. ತಮ್ಮ ರೈತ ಹೋರಾಟದ ಕಥನವನ್ನು ಜನರ ಮುಂದಿಟ್ಟೇ ಅವರು ಓಟು ಕೇಳುತ್ತಾರೆ.
ಪ್ರಧಾನಿಯಾಗಿದ್ದ ದೇವೇಗೌಡರೂ ಅಷ್ಟೇ. ಪಕ್ಷವನ್ನು ಸಂಘಟಿಸಿ, ಕಟ್ಟಿ, ಬೆಳೆಸಿ, ಒಡೆದು, ತಾವೂ ಬೆಳೆದವರು. ಈ ಪಟ್ಟಿಯನ್ನು ಬಹಳ ಉದ್ದಕ್ಕೆ ಬೆಳೆಸಬಹುದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ ಮುಂತಾದ ಅನೇಕರು ರಾಜಕೀಯ ಬದುಕಿನ ಆರಂಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದವರು. ಪಕ್ಷವನ್ನು ಕಟ್ಟುತ್ತಲೇ ತಾವು ಬೆಳೆದವರು. ಆದರೆ ಇಂದು ಕರ್ನಾಟಕದಲ್ಲಿರುವ ಯಾವುದೇ ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ಪದವಿಯ ಕನಸು ಕಾಣಬಹುದೇ? ಅದು ಬಿಡಿ ಕನಿಷ್ಠ ಶಾಸಕನ ಸ್ಥಾನದ ಕನಸನ್ನಾದರೂ ಕಾಣಲು ಸಾಧ್ಯವಿದೆಯೇ?
ತನಿಖೆ ಎಂಬ ಥಳಿಸುವಿಕೆ
ಇದು 1985ರ ಬಿಹಾರ ಕೇಡರ್ನ ಐಎಎಸ್ ಅಧಿಕಾರಿಯೊಬ್ಬರು ಹೇಳಿದ ಕತೆ.
`ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ ಕುರಿತು ವಿಚಾರಿಸುತ್ತಿದ್ದೆ. ಪ್ರತೀ ಬಾರಿ ಹೋದಾಗಲೂ ಪೊಲೀಸರು `ಇನ್ವೆಸ್ಟಿಗೇಷನ್ ಮಾಡುತ್ತಿದ್ದೇವೆ ಸಾರ್’ ಎಂದು ಯಾರಾದರೊಬ್ಬನಿಗೆ ಥಳಿಸುತ್ತಿರುತ್ತಿದ್ದರು. `ನಾನು ಠಾಣೆಗೆ ಹೋದ ದಿನ ನನ್ನನ್ನು ಮೆಚ್ಚಿಸುವುಕ್ಕೋ ಎಂಬಂತೆ ಅವರ ಥಳಿತದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಪ್ರತೀ ಬಾರಿ ಠಾಣೆಗೆ ಹೋದಾಗಲೂ ಹೊಸ ಹೊಸ `ಆರೋಪಿ’ಗಳಿಗೆ ಪೊಲೀಸರು ಥಳಿಸುತ್ತಿದ್ದರೇ ಹೊರತು ಕಳವಾದ ವಸ್ತುಗಳ ಕುರಿತು ಯಾವ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ಈ ಥಳಿಸುವಿಕೆಯನ್ನು ನೋಡಲಾಗದೆ ನಾನು ಕಳವಾದ ವಸ್ತುಗಳ ಆಸೆಯನ್ನೇ ಬಿಟ್ಟೆ’
ಇದು ಭಾರತೀಯ ಪೊಲೀಸ್ ವ್ಯವಸ್ಥೆಯ ಒಂದು ಸಣ್ಣ ಸ್ಯಾಂಪಲ್. ನಮ್ಮ ಪೊಲೀಸರ ಮಟ್ಟಿಗೆ ತನಿಖೆ ನಡೆಸುವುದೆಂದರೆ ಥಳಿಸುವುದು ಎಂದರ್ಥ.
***
ಕಳೆದ ತಿಂಗಳ (ಫೆಬ್ರವರಿ 2009) 27ರಂದು ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಸುಮಾರು 34,000 ರೂಪಾಯಿ ಬೆಲೆಬಾಳುವ ಮೊಬೈಲ್ ಫೋನ್ ಒಂದು ಕಳವಾಯಿತು. ಈಗ ಮೊಬೈಲ್ ಫೋನ್ ಕಳವಾದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಕಳೆದು ಹೋದ ಮೊಬೈಲ್ ಫೋನ್ನ ಐಎಂಇಐ ಸಂಖ್ಯೆ ಅಥವಾ ಇಂಟರ್ ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರ್ ಅನ್ನು ಪೊಲೀಸರಿಗೆ ಕೊಟ್ಟರೆ ಸಾಕು. ಕಳೆದು ಹೋದ ಮೊಬೈಲ್ ಎಲ್ಲಿ ಬಳಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಬಹುದು. ಫೋನ್ ಕಳೆದುಕೊಂಡ ಸಾಫ್ಟ್ವೇರ್ ಇಂಜಿನಿಯರ್ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನೂ ತಿಳಿಸಿದ್ದರು.
ಹರ ಕೊಲ್ಲಲ್ ಪರ ಕಾಯ್ವನೆ?
ಕಳೆದ ಎರಡು ವರ್ಷಗಳಲ್ಲಿ ಬಿಹಾರದಿಂದ ಆರಂಭಿಸಿ ಕರ್ನಾಟಕದ ಹಾಸನದ ತನಕ ದಿಡೀರ್ ನ್ಯಾಯದಾನದ ಹಲವು ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೇವೆ. ಎರಡು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಜಿಲ್ಲೆಯ ಧೆಲ್ಫೋರ್ವಾ ಗ್ರಾಮದಲ್ಲಿ ಕಳವು ಆರೋಪಿಯೊಬ್ಬನನ್ನು ಬೀದಿಯಲ್ಲೇ ಭೀಕರವಾಗಿ ಥಳಿಸಿದ್ದು ಟಿ.ವಿ.ಚಾನೆಲ್ಗಳಲ್ಲಿ ಹಲವಾರು ಬಾರಿ ಪ್ರಸಾರವಾಗಿತ್ತು.
ಇದಾದ ಒಂದೇ ತಿಂಗಳಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್ನಲ್ಲಿ ಚಿನ್ನದ ಕಡಗವೊಂದನ್ನು ಕದ್ದಿದ್ದಾರೆಂಬ ಸಂಶಯದ ಮೇಲೆ 40 ವರ್ಷದ ಗರ್ಭಿಣಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಥಳಿಸಲಾಗಿತ್ತು. ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯನ್ನು ಟಿ.ವಿ.ಚಾನೆಲ್ ವರದಿಗಾರನೊಬ್ಬ ಚಿತ್ರೀಕರಿಸಿದ್ದರಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಮೂಕ ಸಾಕ್ಷಿಗಳಾಗಿದ್ದರು. ಬಿಹಾರದ ಘಟನೆಯ ಸಂದರ್ಭದಲ್ಲಂತೂ ಸಾರ್ವಜನಿಕರ ಥಳಿಸುವಿಕೆಯ ನಂತರ ಪೊಲೀಸರು ಆರೋಪಿಯನ್ನು ರಸ್ತೆಯಲ್ಲಿ ಎಳೆದಾಡಿದ್ದರು. ಕೇರಳದ ಘಟನೆಯಲ್ಲಿ ನಿರಪರಾಧಿ ಮಹಿಳೆ ಮತ್ತು ಆಕೆಯ ಇಬ್ಬರ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವುದರ ಬದಲಿಗೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ಬಗೆಯ ದಿಡೀರ್ ನ್ಯಾಯದಾನದ ಪ್ರಕರಣಗಳು ಬಿಹಾರದಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ದೇಶದ ಉಳಿದೆಡೆ ಇಲ್ಲ ಎಂದಲ್ಲ. ಬಸ್ನಿಲ್ದಾಣದಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಒಬ್ಬನ ಮೇಲೆ ಕಳ್ಳನೆಂಬ ಸಂಶಯ ಬಂದರೆ ಆತ ಜನರಿಗೆ ಕಳ್ಳರ ಮೇಲಿರುವ ಸಿಟ್ಟಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹೀಗೆ ಥಳಿತಕ್ಕೆ ಗುರಿಯಾದವರಲ್ಲಿ ಕೆಲವರು ಸ್ಥಳದಲ್ಲಿ ಮೃತಪಟ್ಟರೆ ಇನ್ನು ಕೆಲವರು ಹಲವಾರು ದಿನ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದದ್ದೂ ಇದೆ.