ಹರಿದಾಸ್ ಮುಂದ್ರಾ ಹಗರಣಕ್ಕೆ ಈಗ ಅರವತ್ತು ತುಂಬುತ್ತಿದೆ. ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣ ಎನ್ನಬಹುದಾದ ಈ ಪ್ರಕರಣ ಭಾರತದ ಭ್ರಷ್ಟಾಚಾರದ ಇತಿಹಾಸದಲ್ಲೊಂದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಪ್ರಕರಣ ಬಯಲಿಗೆ ತಂದದ್ದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಅಳಿಯ ಫಿರೋಜ್ ಗಾಂಧಿ. ಈ ಪ್ರಕರಣ ಮಾವ ಮತ್ತು ಅಳಿಯನ ಮಧ್ಯೆ ಬಹುದೊಡ್ಡ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ಈ ಭಿನ್ನಾಭಿಪ್ರಾಯಗಳೇನೇ ಇದ್ದರೂ ನೆಹರು ಈ ಹಗರಣದ ತನಿಖೆಗೆ ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗವೊಂದನ್ನು ರಚಿಸಿದ್ದರು. ಆಯೋಗದ ಶಿಫಾರಸನ್ನು ಕಾರ್ಯರೂಪಕ್ಕೂ ತಂದರು.
ಕನ್ನಡಿಯೆದುರಿನ ಗೊರಿಲ್ಲಾಗಳು ಮತ್ತು ಕನ್ನಡದ ತಲ್ಲಣಗಳು
ನೊಬೆಲ್ ಪುರಸ್ಕೃತ ಕೊಲಂಬಿಯನ್ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುತ್ತಾರೆ. ಅದರ ಇಂಗ್ಲಿಷ್ ಮತ್ತು ಫ್ರೆಂಚ್ ಅನುವಾದಗಳ ಮೂಲಕ ಜಗತ್ತು ಅವರನ್ನು ಅರಿಯುತ್ತದೆ. ಅನುವಾದಗಳಲ್ಲೂ ಅವರು `ಬೆಸ್ಟ್ ಸೆಲ್ಲರ್’ ಲೇಖಕ. ಅವರ ಬಹುಮುಖ್ಯ ಕಾದಂಬರಿಗಳಾದ `ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’,`ಕ್ರಾನಿಕಲ್ ಆಫ್ ಡೆತ್ ಫೋರ್ಟೋಲ್ಡ್’ ಮತ್ತು ಹಲವು ಸಣ್ಣ ಕತೆಗಳು ಕನ್ನಡಕ್ಕೂ ಅನುವಾದಗೊಂಡು ಜನಪ್ರಿಯವಾಗಿವೆ. ಈ ಲೇಖಕನ ಆತ್ಮಕತೆಯ ಮೊದಲ ಭಾಗವಾದ `ಲಿವಿಂಗ್ ಟು ಟೆಲ್ ದ ಟೇಲ್’ನಲ್ಲಿ ಮಾರ್ಕ್ವೆಜ್ ಶಾಲೆಗೆ ಸೇರುವುದಕ್ಕೆ ಸಂಬಂಧಿಸಿದಂತೆ ಅವರ ಅಪ್ಪ-ಅಮ್ಮನ ಮಧ್ಯೆ ನಡೆದ ಮಾತುಕತೆಯ ವಿವರವಿದೆ.
ಕನ್ನಡವೇ ಸತ್ಯ
ದಕ್ಷ ಸೇವೆಯಲ್ಲಿ `ಸೇವೆ’ ಎಷ್ಟಿದೆ?
ನಲ್ಲೂರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ಒಂದು ಗ್ರಾಮ. ಹಾಸನ ಮತ್ತು ಸಕಲೇಶಪುರ ನಗರಗಳೆರಡರಿಂದಲೂ ಸಮಾನ ದೂರದಲ್ಲಿರುವ ಅಷ್ಟೇನೂ ಒಳ್ಳೆಯ ರಸ್ತೆಯಿಲ್ಲದ ಮಲೆನಾಡಿನ ಈ ಹಳ್ಳಿಗೆ ಹತ್ತು ವರ್ಷಗಳ ಹಿಂದೆ ಇದ್ದದ್ದು ಒಂದೇ ಬಸ್ಸು. ರಾಷ್ಟ್ರೀಯ ಹೆದ್ದಾರಿಯಿಂದ ಆರೇ ಕಿಲೋಮೀಟರ್ಗಳಷ್ಟು ದೂರವಿದ್ದರೂ ಬಸ್ಸು ಮಾತ್ರ ಬೆಳಿಗ್ಗೆ ಮತ್ತು ಸಂಜೆ ಬರುತ್ತಿತ್ತು. ಇತ್ತೀಚೆಗೆ ಬಸ್ಸುಗಳ ಸಂಖ್ಯೆ ನಾಲ್ಕಾಗಿದೆ. ಬೆಳಿಗ್ಗೆ ಸಕಲೇಶಪುರದಿಂದ ಬರುವ ಬಸ್ಸು ಪೂರ್ಣ ಖಾಲಿಯಾಗಿಯೇ ನಲ್ಲೂರಿಗೆ ಬರುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಆರು ಕಿಲೋಮೀಟರ್ಗಳ ಒಳಗೆ ಬಸ್ಸು ತುಂಬಿಕೊಳ್ಳುತ್ತದೆ. ಇದಕ್ಕೆ ಹತ್ತುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹ ಪಾಲು. ಉಳಿದವರು ಆಸ್ಪತ್ರೆಗೆ ಹೋಗುವವರು, ಸಂತೆಗೆ ಹೋಗುವವರು ಹೀಗೆ ಆಯಾ ದಿನದ ವಿಶೇಷಗಳಿಗೆ ಪ್ರಯಾಣಿಸುವವರು. ಈ ಸಂಖ್ಯೆ ಕೆಲವೊಮ್ಮೆ ಬಸ್ಸಿನ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.
ಪ್ರತಿಭಟನೆಯ ಅವಸಾನ
ಅದು 1999ರ ವಿಧಾನಸಭಾ ಚುನಾವಣೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ನ ಹಿರಿಯ ನಾಯಕರಲ್ಲಿ ಒಬ್ಬರಾದ ಡಿ.ಬಿ. ಚಂದ್ರೇಗೌಡ ಸ್ಪರ್ಧಿಸಿದ್ದರು. ಈ ಹೊತ್ತಿಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕಾಗಿ ಗಿರಿಜನರನ್ನು ಒಕ್ಕಲೆಬ್ಬಿಸಲು ಅಗತ್ಯವಿರುವ ಔಪಚಾರಿಕತೆಗಳನ್ನು ಪೂರೈಸಿಕೊಂಡಿದ್ದ ಅರಣ್ಯ ಇಲಾಖೆ `ಕಾರ್ಯಾಚರಣೆ’ಗೆ ಮುಂದಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೊಂದು ಹೋರಾಟ ನಡೆಯುತ್ತಿತ್ತು. ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂಬ ಮಾತುಗಳನ್ನೂ ಹೋರಾಟಗಾರರು ಆಡಿದ್ದರು. ಈ ಹೊತ್ತಿನಲ್ಲಿ ಡಿ.ಬಿ. ಚಂದ್ರೇಗೌಡರ ಮಧ್ಯ ಪ್ರವೇಶವಾಯಿತು. `ಗಿರಿಜನರ ಹಿತ ಕಾಪಾಡುತ್ತೇನೆಂದು ನಾನು ನನ್ನ ರಕ್ತದಲ್ಲಿ ಬೇಕಾದರೂ ಬರೆದುಕೊಡಲು ಸಿದ್ಧ’ ಎಂಬ ಭರವಸೆ ನೀಡಿದರು.
ಚುನಾವಣಾ ಫಲಿತಾಂಶಗಳು ಹೊರಬಿದ್ದವು. ಡಿ.ಬಿ. ಚಂದ್ರೇಗೌಡರು ಗೆದ್ದಿದ್ದರು. ಅವರ ಗೆಲುವಿಗೆ ಆದಿವಾಸಿ-ಗಿರಿಜನರು ಎಷ್ಟರ ಮಟ್ಟಿಗೆ ಕಾರಣರಾಗಿದ್ದರೋ ಗೊತ್ತಿಲ್ಲ. ಚಂದ್ರೇಗೌಡರು ಎಸ್.ಎಂ.ಕೃಷ್ಣ ಸರಕಾರದಲ್ಲಿ ಕಾನೂನು ಸಚಿವರಾಗಿದ್ದಂತೂ ನಿಜ. ತಮ್ಮ ಕ್ಷೇತ್ರದ ಶಾಸಕರೇ ಕಾನೂನು ಸಚಿವರಾದದ್ದನ್ನು ಕಂಡ ಆದಿವಾಸಿಗಳು ತಮ್ಮ ಸಮಸ್ಯೆ ಪರಿಹಾರವಾಗುತ್ತದೆಂದು ನಂಬಿದರು. ಆದರೆ ಚಂದ್ರೇಗೌಡರು ನಿಧಾನವಾಗಿ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದರು. ರಾಷ್ಟ್ರೀಯ ಉದ್ಯಾನವನ ಕಾಯ್ದೆಗೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಅದು ಕೇಂದ್ರ ಸರಕಾರದ ಕಾನೂನು, ನಮಗೇನೂ ಮಾಡಲು ಸಾಧ್ಯವಿಲ್ಲ. ಹೀಗೆ ನೂರೆಂಟು ತಾಂತ್ರಿಕ ಕಾರಣಗಳನ್ನು ಮುಂದೊಡ್ಡತೊಡಗಿದರು.
ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು
ಮಾಧ್ಯಮಗಳಲ್ಲಿ ಪ್ರಕಟವಾಗುವ ಸಾವಿನ ಸುದ್ದಿಗಳಲ್ಲಿ ಎರಡು ವಿಧ. ಮೊದಲನೆಯದ್ದು ಕೇವಲ ಸಂಖ್ಯೆಗಳಲ್ಲಿ ಹೇಳುವ ಸಾವುಗಳು. ಎರಡನೆಯದ್ದು ಸತ್ತ ವ್ಯಕ್ತಿಯ ಕುರಿತು ಹೇಳುವಂಥದ್ದು. ಅಪಘಾತಗಳು, ಆಕಸ್ಮಿಕಗಳು, ದುರಂತಗಳು ಸಂಭವಿಸಿದಾಗ ಸತ್ತವರ ಸಂಖ್ಯೆಗಳೇ ಮುಖ್ಯವಾಗಿ ಸತ್ತವರು ಯಾರೆಂಬುದು ನಗಣ್ಯವಾಗಿಬಿಡುತ್ತವೆ. ಪ್ರಮುಖ ವ್ಯಕ್ತಿಗಳ ಮರಣದ ಸಂದರ್ಭದಲ್ಲಿ ವ್ಯಕ್ತಿಯೇ ಮುಖ್ಯ. ಈ ಎರಡೂ ಅಲ್ಲದ ಸಂದರ್ಭವೊಂದರಲ್ಲಿ ವ್ಯಕ್ತಿ ಮುಖ್ಯನಾಗುವುದೂ ಇದೆ. ಬೆಂಗಳೂರಿನ ಉದಾಹರಣೆಯನ್ನೇ ಪರಿಗಣಿಸುವುದಾದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಕೊಲೆಯಾದರೆ ಆತ/ಆಕೆ `ಪ್ರಮುಖ’ನಲ್ಲದೇ ಹೋದರೂ ಮುಖ್ಯ ಸುದ್ದಿಯಾಗುವುದಿದೆ. ಹೊರ ಗುತ್ತಿಗೆ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಕೊಲೆಯಾದಾಗ ಅದು ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಸುದ್ದಿಯಾಗಿತ್ತು. ಈಗಲೂ ಆ ಪ್ರಕರಣದ ವಿಚಾರಣೆಯ ವಿವರಗಳು ಮಾಧ್ಯಮಗಳಲ್ಲಿ ಕಾಣಿಸುತ್ತಲೇ ಇರುತ್ತದೆ.
ಅಫ್ತಾಬ್ ಅಲಂ ಅನ್ಸಾರಿ ಬಾಂಗ್ಲಾದೇಶಿಯಾದದ್ದು

ಟ್ಯಾಕ್ಸಿ ಬಂದು ನರೀಮನ್ ಪಾಯಿಂಟ್ನ ಬಹುಮಹಡಿ ಕಟ್ಟಡದ ಎದುರು ನಿಲ್ಲುವ ಹೊತ್ತಿಗೆ ಅಜೀಜ್ಗೆ ಮುಂಬೈ ಬದಲಾಗಿಲ್ಲ ಅನ್ನಿಸತೊಡಗಿತ್ತು. ಲೋಕಲ್ ಟ್ರೈನುಗಳು ಮುಂಬೈಯನ್ನು ಸೀಳಿಕೊಂಡು ಓಡುತ್ತಿವೆ. ಚರ್ಚ್ ಗೇಟ್ನಲ್ಲಿ ಎಂದಿನಂತೆ ಪ್ರಯಾಣಿಕರ ಗುಂಪು ಇಳಿದು ಆಚೀಚೆ ನೋಡದೆ ಓಡುತ್ತಿದೆ. ಊಟದ ಡಬ್ಬ ಸೈಕಲೇರುತ್ತಿವೆ…
ಅಮೆರಿಕದ ಆರೋಗ್ಯಕ್ಕೆ ಭಾರತದ ಸಬ್ಸಿಡಿ

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್) ಇರುವುದು ದಿಲ್ಲಿಯಲ್ಲಿ. ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುವುದು ಮತ್ತು ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಿದು. ಸಂಸತ್ತು ಅಂಗೀಕರಿಸಿದ ಮಸೂದೆಯೊಂದರ ಮೂಲಕ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಸ್ವಾಯತ್ತ ಸ್ವರೂಪವನ್ನು ಹೊಂದಿದೆ. ಈ ಕಳೆದ ಎರಡು ವರ್ಷಗಳಿಂದ ಭಾರೀ ಸುದ್ದಿ ಮಾಡುತ್ತಿದೆ. ಅಂದರೆ ಇದು ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ್ದನ್ನು ಸಾಧಿಸಿದೆ ಎಂದೇನೂ ಭಾವಿಸಬೇಕಾಗಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನಡೆಸಿದ ಮತ್ತು ಈಗಲೂ ಬೇರೆ ಬೇರೆ ಸ್ವರೂಪದಲ್ಲಿ ಮುಂದುವರಿಸಿರುವ ಮೀಸಲಾತಿ ವಿರೋಧಿ ಚಳವಳಿ ಮತ್ತು ಆಗಾಗ ನಡೆಸುವ ಕಿರಿಯ ವೈದ್ಯರ ಮುಷ್ಕರಗಳಿಂದಾಗಿ ಈ ಸಂಸ್ಥೆ ಸುದ್ದಿಯಾಗುತ್ತದೆ.
ಟಾಟಾ ‘ಉತ್ಪಾದಿಸಿದ’ ಅಭಿವೃದ್ಧಿಯ ಸಂಕೇತ
`ರಸ್ತೆ’ ಎಂಬ ಪರಿಕಲ್ಪನೆ ತೀರಾ ಆಧುನಿಕವಾಗಿದ್ದರೂ ಅದನ್ನು ಹೋಲುವ ಪರಿಕಲ್ಪನೆಯೊಂದು ಎಲ್ಲ ಜೀವಿಗಳ ಬದುಕಿನಲ್ಲೂ ಇದೆ. ಪ್ರಾಣಿಗಳಂತೂ ನಿರ್ದಿಷ್ಟ ಜಾಡಿನಲ್ಲಿ (track) ತಮ್ಮ ಸಂಚಾರ ನಡೆಸುತ್ತವೆ. ಮನುಷ್ಯರೂ ಅಷ್ಟೇ, ಅವರ ಸಂಚಾರಕ್ಕೊಂದು ಕಾಲು ಹಾದಿ ಇದ್ದೇ ಇರುತ್ತದೆ.
ಜನ ವಿರೋಧಿ ಜನತಾ ದರ್ಶನ
ಕರ್ನಾಟಕದ ರಾಜ್ಯಪಾಲರ ಇತ್ತೀಚಿನ ಜನತಾದರ್ಶನದಲ್ಲಿ ಅವರು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ 1200. ಇವು ಕೇವಲ ಎರಡೇ ಗಂಟೆಗಳಲ್ಲಿ ಸಂಗ್ರಹವಾದ ಅರ್ಜಿಗಳ ಸಂಖ್ಯೆ. ಈ ಅರ್ಜಿಗಳಲ್ಲಿ ದೂರದ ಗುಲ್ಬರ್ಗದಿಂದ ಮಗನ ಹೃದ್ರೋಗ ಚಿಕಿತ್ಸೆಗೆ ನೆರವು ಯಾಚಿಸಿ ಬಂದಿದ್ದ ಮಹಿಳೆಯಿಂದ ಆರಂಭಿಸಿ ವೃದ್ಧಾಪ್ಯ ವೇತನಕ್ಕಾಗಿ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿ ಬೆಂಗಳೂರಿಗೆ ಬಂದ ವೃದ್ಧರಿದ್ದರು. ರಾಜ್ಯಪಾಲರು ಅರ್ಜಿ ಗಳನ್ನೆಲ್ಲಾ ಸ್ವೀಕರಿಸಿದರು. ಹೃದಯ ಚಿಕಿತ್ಸೆಗೆ ನೆರವು ಯಾಚಿಸಿದ್ದ 34 ಮಂದಿಗೆ ತಲಾ 25,000 ಸಾವಿರ ರೂಪಾಯಿಗಳ ಚೆಕ್ ವಿತರಿಸಿದರು. ಇವರಲ್ಲಿ ಕೆಲವರು ಸರಕಾರೀ ಸ್ವಾಮ್ಯದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದರೆ ಇನ್ನು ಕೆಲವರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯ ಲಿದ್ದಾರೆ. ಜನತಾದರ್ಶನದಲ್ಲಿ ಭಾಗವಹಿಸಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ `ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು’.
ಕಷ್ಟದಲ್ಲಿರುವವರ ಅರ್ಜಿ ಸ್ವೀಕರಿಸಿ ಪರಿಹಾರ ನೀಡುವ ರಾಜ್ಯಪಾಲರ ದೊಡ್ಡ ಮನಸ್ಸನ್ನು ಕೊಂಡಾಡದೇ ಇರಲು ಸಾಧ್ಯವೇ? ಮಾಧ್ಯಮಗಳಲ್ಲೆಲ್ಲಾ 34 ಮಂದಿಗೆ ನೀಡಿದ 25,000 ರೂಪಾಯಿಗಳು ದೊಡ್ಡ ಸುದ್ದಿಯೇ ಆಯಿತು. ಮುಂದಿನ ಜನತಾದರ್ಶನದ ಹೊತ್ತಿಗೆ ಇದೇ ಬೇಡಿಕೆಯುಳ್ಳ ಮತ್ತಷ್ಟು ಮಂದಿ ರಾಜ್ಯಪಾಲರಿಗಾಗಿ ಕಾಯುತ್ತಾ ಸರದಿ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂಶಯವಿಲ್ಲ. ದಯಾಳುವಾದ ರಾಜ್ಯಪಾಲರು ಅವರಿಗೂ ಒಂದಷ್ಟು ದುಡ್ಡನ್ನು ಹೊಂದಿಸಿ ಕೊಡಬಹುದು. ಅದೂ ಮಾಧ್ಯಮಗಳಲ್ಲಿ ಸುದ್ದಿಯಾಗಬಹುದು.