Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಯೇಸುಕ್ರಿಸ್ತ

Posted on October 2, 2006April 10, 2019 by Ismail

ನಾರಾಯಣ ಗುರುಗಳ ಪರಂಪರೆಯ ಗುರು ನಿತ್ಯಚೈತನ್ಯ ಯತಿಗಳು ಎಲ್ಲ ಧರ್ಮಗಳ ಬಗ್ಗೆಯೂ ಆಳವಾದ ಅರಿವಿದ್ದವರು. ದೇಹಕ್ಕೆ ಬಾಧಿಸುವ ರೋಗಗಳಿಗಿಂತಲೂ ಹೆಚ್ಚಾಗಿ ಮನುಷ್ಯನನ್ನು ಕಾಡುವುದು ಮನಸ್ಸಿಗೆ ಬಾಧಿಸುವ ಆಧ್ಯಾತ್ಮಿಕ ರೋಗಗಳು. ಈ ರೋಗಗಳನ್ನು ಪರಿಹರಿಸಿದ ಮಹಾವೈದ್ಯರಲ್ಲಿ ಯೇಸು ಕ್ರಿಸ್ತರೂ ಇದ್ದಾರೆಂಬುದು ಯತಿಗಳ ಅನಿಸಿಕೆ. ಅವರು ಈ ಬಗೆಯ ಅಪೂರ್ವ ವೈದ್ಯರ ಕುರಿತು ರಚಿಸಿರುವ ಗ್ರಂಥದಲ್ಲಿರುವ ಯೇಸುವಿನ ಕುರಿತ ಬರೆಹದ ಭಾವಾನುವಾದ ಇಲ್ಲಿದೆ.

ಗುರುಕುಲದಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಹೆಸರು ಜೋಸೆಫ್‌. ಆತ ಮಾಡುವ ಕೆಲಸ; ಕಳೆದ ಎರಡು ಸಾವಿರ ವರ್ಷಗಳಿಂದಲೂ ಉಳಿದುಕೊಂಡು ಬಂದಿರುವ ಬಡಗಿಯ ಕೆಲಸ. ನಾವಿಬ್ಬರು ಒಟ್ಟಿಗೆ ಕುಳಿತು ಮಾತನಾಡುವಾಗಲೆಲ್ಲಾ ನನ್ನನ್ನು ಬಹಳವಾಗಿ ಆಕರ್ಷಿಸುವುದು ಈ ಜೋಸೆಫ್‌ನ ಮಗ. ಅಪ್ಪನಿಂದ ಬರುವುದನ್ನೆಲ್ಲಾ ಈ ಮಗ ಪಡೆದುಕೊಂಡಿದ್ದ. ನಾನವನನ್ನು ಯೇಸು ಎಂದೇ ಕರೆಯುತ್ತಿದ್ದೆ. ಯೇಸು ಎಂಬ ಪದದ ಅರ್ಥ ಮತ್ತಾಯನು ಬರೆದ ಸುವಾರ್ತೆಯಲ್ಲಿ ಹೇಳಿರುವಂತೆ `ಜನಗಳನ್ನು ಪಾಪಗಳಿಂದ ಕಾಪಾಡುವವನು’ ಎಂದಾಗಿದೆ. ಇಂದು ಮುಂಜಾನೆ ಗೆಳೆಯ ಜೋಸೆಫ್‌ ಜತೆ ಮಾತನಾಡಲು ತೊಡಗಿದಾಗ ವಾಗ್‌ರೂಪಿಯಾದ ಯೇಸುವನ್ನು ಕಂಡ ನಾನು ಕೇಳಿದೆ:

`ನೀನು ಹೇಗೆ ಜನರನ್ನು ಪಾಪಗಳಿಂದ ವಿಮೋಚಿಸುತ್ತೀಯಾ?’

ಆಗ ಯೇಸು ಪ್ರಶ್ನಿಸಿದ: `ಬೈಬಲ್‌ನ ಆದಿ ಕಾಂಡವನ್ನು ಓದಿದ್ದೀಯಾ?’ ನಾನು ಹೌದೆಂದು ಗೋಣಾಡಿಸಿದೆ. ಸಂಭಾಷಣೆ ಮುಂದುವರಿಯಿತು.

ಯೇಸು: ಅದರಲ್ಲಿ ಹೇಳಲಾದ ಮೂರು ಆದಿಗಳು ಗೊತ್ತೇ?

ನಾನು: ಜಗತ್ತಿನ ಸೃಷ್ಟಿಗೆ ಮೊದಲಿದ್ದ ಆದಿಯ ಬಗ್ಗೆ ಹೇಳಿರುವುದು ನನಗೆ ನೆನಪಾಗುತ್ತಿದೆ. ಮೊದಲನೆಯ ಆದಿ ಸೃಷ್ಟಿಗೆ ಮೊದಲಿದದ್ದು. ಆಗ ಆದಿ ಸಾಗರದ ಮೇಲೆ ಕವಿದಿದ್ದ ಕತ್ತಲಿನ ಮೇಲೆ ದೇವರ ಚೈತನ್ಯ ಚಲಿಸುತ್ತಿತ್ತು. ಈ ಪ್ರಪಂಚದ ಸೃಷ್ಟಿಗೆ ದೇವರ ಆದೇಶ ಹೊರಬಿದ್ದುದನ್ನು ಎರಡನೇ ಆದಿ ಎಂದು ಕರೆಯಬಹುದು. `ಬೆಳಕಾಗಲಿ’ ಎಂದು ಆದೇಶಿಸಿದ ಕ್ಷಣದಿಂದ ಆರಂಭವಾಗುವ ಎರಡನೇ ಆದಿ ಆರು ದಿನದವರೆಗೂ ಮುಂದುವರೆಯುತ್ತದೆ. ಮೂರನೇ ಆದಿ ಆದಮನ ಸೃಷ್ಟಿಯಿಂದ ಆರಂಭಗೊಳ್ಳುವ ಮನುಷ್ಯ ಜೀವಿಯ ಸೃಷ್ಟಿಯೊಂದಿಗೆ ಆರಂಭವಾಗುತ್ತದೆ.

ಯೇಸು: ಮನುಷ್ಯನ ಸೃಷ್ಟಿಯ ಬಗ್ಗೆ ಹೇಳುವಾಗ ಆದಮನ ವಂಶಾವಳಿಯನ್ನೂ ಹೇಳಿದ್ದು ನೆನಪಿದೆಯೇ?

ನಾನು: ನೆನಪಿದೆ

ಯೇಸು: ಆ ವಂಶಾವಳಿ ಎಲ್ಲಿಯವರೆಗಿದೆ?

ನಾನು: ನೋಹನ ಪುತ್ರನಾದ ಅಬ್ರಾಹಮ ಮತ್ತು ನಾಹೇರನವರೆಗೆ.

ಯೇಸು: ಅಬ್ರಾಹಮನ ವಂಶಾವಳಿಯ ಬಗ್ಗೆ ಹೇಳಲಾಗಿದೆಯೇ?

ನಾನು: ಮತ್ತಾಯನು ಬರೆದ ಸುವಾರ್ತೆಯಲ್ಲಿ ಅಬ್ರಾಹಮನಿಂದ ಆರಂಭಗೊಂಡು ದಾವೀದನವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ, ದಾವೀದನಿಂದ ಆರಂಭಗೊಂಡು ಬ್ಯಾಬಿಲೋನ್‌ ಪ್ರವಾಸದವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ ಮತ್ತು ಬ್ಯಾಬಿಲೋನ್‌ ಪ್ರವಾಸದಿಂದ ಜೋಸೆಫ್‌ನವರೆಗಿನ ಹದಿನಾಲ್ಕು ತಲೆಮಾರುಗಳ ಬಗ್ಗೆ ಹೇಳಲಾಗಿದೆ.

ಯೇಸು: ಇದೇ ರೀತಿಯ ವಂಶಾವಳಿಗಳನ್ನು ಬೇರೆಲ್ಲಿಯಾದರೂ ಹೇಳಲಾಗಿದೆಯೇ?

ನಾನು: ಮಹಾಭಾರತದಲ್ಲಿ.

ಯೇಸು: ಮಹಾಭಾರತದ ವಂಶಾವಳಿಗಳು ಎಲ್ಲಿಂದ ಆರಂಭವಾಗುತ್ತವೆ?

ನಾನು: ಸೂರ್ಯನ ಶಕ್ತಿ ಭೂಮಂಡಲಕ್ಕೆ ಜೀವ ಚೈತನ್ಯವನ್ನು ಕೊಡುವ ಕ್ಷಣದಿಂದ.

ಯೇಸು: ಹಾಗಾದರೆ ಮೊದಲ ಜೀವಿಯ ಹೆಸರೇನು?

ನಾನು: ವೈವಸ್ವತ.

ಯೇಸು: ವೈವಸ್ವತನಿಂದ ಏನು ಆರಂಭವಾಗುತ್ತದೆ?

ನಾನು: ಮನ್ವಂತರಗಳು.

ಯೇಸು: ನೀನು ಈ ಪರಂಪರೆಯಲ್ಲಿ ನಂಬಿಕೆ ಇಟ್ಟಿದ್ದೀಯಾ?

ನಾನು: ಹೌದು. ನಂಬಿಕೆ ಇಟ್ಟಿದ್ದೇನೆ. ಯಾವ ಶಿಷ್ಯನಿಗೂ ಪರಂಪರೆಯಲ್ಲಿ ನಂಬಿಕೆ ಇಟ್ಟುಕೊಳ್ಳದಿರಲು ಸಾಧ್ಯವಿಲ್ಲ. ಆದಿ ನಾರಾಯಣನಿಂದ ಆರಂಭಗೊಳ್ಳುವ ವಂಶಾವಳಿಯನ್ನು ಅರಿತಿರುವುದರಿಂದಲೇ ಪ್ರತೀ ಶಿಷ್ಯನೂ `ವಂಶಋಷಿಭ್ಯೋ ಗುರುಭ್ಯೋ’ ಎಂದು ಪ್ರತೀ ಮುಂಜಾನೆಯೂ ವಂಶಾವಳಿಯಲ್ಲಿರುವ ಗುರುಗಳನ್ನೆಲ್ಲಾ ಸ್ತುತಿಸುತ್ತಾನೆ. ಬೃಹದಾರಣ್ಯಕೋಪನಿಷತ್ತಿನ ಐದನೇ ಅಧ್ಯಾಯದ ಆರನೇ ಬ್ರಾಹ್ಮಣದಲ್ಲಿ ಪೌತಿಮಾಷಿಯ ಪುತ್ರನಿಂದ ಆರಂಭಗೊಂಡು ಆತ್ರೇಯನವರೆಗೂ ಆತ್ರೇಯನಿಂದ ಆಸುರಿಯವರೆಗೂ ವಿಲೋಮವಾಗಿ ಸಾಗುವ ವಂಶಾವಳಿಯ ವಿವರಗಳಿವೆ. ಅದರಂತೆ ನಾರಾಯಣ, ಪದ್ಮಭವ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ, ಗೌಡಪಾದ, ಗೋವಿಂದ, ಶಂಕರ ಮೊದಲಾದ ಆಚಾರ್ಯರಿಂದ ಆರಂಭಿಸಿ ನನ್ನ ಗುರುಗಳವರೆಗಿನ ಗುರು ಪರಂಪರೆ ಮುಂದುವರೆಯುತ್ತದೆ.

ಯೇಸು: ಇದರಿಂದ ನಿನಗೆ ಅರ್ಥವಾದದ್ದೇನು?

ನಾನು: ಮನುಷ್ಯರು ಯಾವಾಗಲೂ ಒಂಟಿಯಾಗಿರಲಿಲ್ಲ.

ಯೇಸು: ಆದಿಯಲ್ಲಿ ಆರಂಭಗೊಂಡದ್ದೆಲ್ಲವೂ ಮುಂದುವರಿದವಲ್ಲವೇ?

ನಾನು: ಖಂಡಿತವಾಗಿಯೂ ಮುಂದುವರಿದವು.

ಯೇಸು: ದೇವರ ಆದಿ ಪುತ್ರನಾದ ಆದಮನು ದೇವರ ಅಣತಿಯನ್ನು ಮೀರಲಿಲ್ಲವೇ?

ನಾನು: ಹೌದು

ಯೇಸು: ಮನುಷ್ಯನ ಆದಿ ಪುತ್ರನಾದ ಕಾಯಿನ ನೀತಿವಂತನಾಗಿದ್ದನೇ?

ನಾನು: ಇಲ್ಲ. ಆತ ತನ್ನ ಸಹೋದರನನ್ನೇ ಕೊಂದು ದೇವರೆದುರು ನಿರುತ್ತರನಾಗಿ ನಿಂತ.

ಯೇಸು: ಜೋಸೆಫ್‌ನ ತಲೆಮಾರಿನವರು ನೀತಿವಂತರಾಗಿದ್ದರೇ?

ನಾನು: ಇಲ್ಲ. ಅವರು ಪ್ರೇಮ ಸ್ವರೂಪಿಯಾದ ನಿನ್ನನ್ನೇ ಅನ್ಯಾಯವಾಗಿ ಶಿಲುಬೆಗೇರಿಸಿದರು.

ಯೇಸು: ಹಾಗಾದರೆ ದೇವರ ಸೃಷ್ಟಿಗೊಂದು ಪರಂಪರೆ ಇರುವಂತೆಯೇ ಕೆಡುಕಿಗೂ ಒಂದು ಪರಂಪರೆ ಇದೆಯಲ್ಲವೇ?

ನಾನು: ಹೌದು ಸ್ವಾಮಿ.

ಯೇಸು: ಈ ಎರಡು ಪರಂಪರೆಗಳ ನಡುವಿನ ಭಿನ್ನತೆಗಳೇನು?

ನಾನು: ಎಲ್ಲವೂ ಎಲ್ಲರಿಗಾಗಿ ಎಂದು ಭಾವಿಸುವುದು ದೈವ ಪರಂಪರೆ. ನನ್ನದು ನನಗೆ ಮಾತ್ರ ಎಂದು ಭಾವಿಸುವುದು ಪಾಪಿಯ ಪರಂಪರೆ.

ಯೇಸು: ಹಾಗಾದರೆ ಪಾಪವೆಂದರೇನು?

ನಾನು: ನಾನು, ನನ್ನದು ಎಂಬುವುಗಳಲ್ಲಿರುವ ನಂಬಿಕೆ.

ಯೇಸು: ಪಾಪಿಯ ಧ್ವನಿ ಹೇಗಿರುತ್ತದೆ?

ನಾನು: `ನಾನು ನನ್ನ ಸಹೋದರನನ್ನು ರಕ್ಷಿಸಬೇಕೆ?’ ಎಂದು ಆತ ಕೋಪಾವಿಷ್ಠನಾಗಿ ಪ್ರಶ್ನಿಸುತ್ತಾನೆ.

ಯೇಸು: ದೇವರ ಪರಂಪರೆಯವನು ಏನು ಹೇಳುತ್ತಾನೆ?

ನಾನು: ನಿನ್ನಂತೆಯೇ ನಿನ್ನ ನೆರೆಯವನನ್ನೂ ಪ್ರೀತಿಸು ಎನ್ನುತ್ತಾನೆ.

ಯೇಸು: ಹಾಗಾದರೆ ಪಾಪದ ಬಗ್ಗೆ ನಿನ್ನ ನಿಲುವೇನು?

ನಾನು: ಎಲ್ಲ ರೋಗಗಳಿಗಿಂತಲೂ ಕೆಟ್ಟದ್ದು, ಕ್ರೂರವಾದದ್ದು ಹಾಗೂ ದುಃಖದಾಯಕವಾದ ರೋಗವೊಂದಿದ್ದರೆ ಅದು ಸ್ವಾರ್ಥವೆಂಬ ಪಾಪವಾಗಿದೆ.

ಯೇಸು: ಆ ರೋಗಕ್ಕಿರುವ ಮದ್ದು ಯಾವುದು?

ನಾನು: ಪಾಪವೆಂಬ ರೋಗಕ್ಕಿರುವ ಏಕೈಕ ಔಷಧವೆಂದರೆ ತ್ಯಾಗ.

ಯೇಸು: ನೀನು ಮಾರ್ಗದರ್ಶನಕ್ಕಾಗಿ ಕೈಯಲ್ಲಿ ಹಿಡಿದುಕೊಂಡಿರುವ ಹಣತೆ ಯಾವುದು?

ನಾನು: ಶ್ರೀಮದ್‌ಭಗವದ್ಗೀತೆ.

ಯೇಸು: ಗೀತೆ ಏನನ್ನು ಕಲಿಸುತ್ತದೆ?

ನಾನು: ತ್ಯಾಗಿಯಾಗಿ ಬದುಕುವುದನ್ನು ಕಲಿಸುತ್ತದೆ.

ಯೇಸು: ಅದು ಹೇಗೆ?

ನಾನು: ನನಗೆ ಕಾಣುತ್ತಿರುವುದೆಲ್ಲವೂ ದೇವರಾಗಿರುವುದರಿಂದ. ದೇವರು ಈ ಎಲ್ಲವುಗಳ ಹೃದಯದಲ್ಲಿಯೂ ಆಶ್ರಯ ಪಡೆದಿರುವುದರಿಂದ.

ಯೇಸು: ನೀನೇಕೆ ನನ್ನನ್ನು ಹುಡುಕುತ್ತಿದ್ದೀಯಾ?

ನಾನು: ಸಕಲ ರೋಗಗಳಿಗೂ ಮದ್ದು ಕೊಡುವ ಮಹಾ ವೈದ್ಯನಾಗಿರುವುದರಿಂದ.

ಯೇಸು: ನನ್ನಿಂದ ನೀನು ನಿರೀಕ್ಷಿಸುತ್ತಿರುವ ಔಷಧ ಯಾವುದು?

ನಾನು: ಪ್ರೀತಿ.

ಯೇಸು: ಆ ಪ್ರೀತಿಯನ್ನು ನೀನು ಹೇಗೆ ಗುರುತಿಸುತ್ತೀಯಾ?

ನಾನು: ಈ ಪ್ರಪಂಚದ ಎಲ್ಲಾ ಅಣುವಿನಲ್ಲಿಯೂ ಪ್ರಕಾಶಿಸುತ್ತಿರುವ ದೇವರೇ ಈ ಎಲ್ಲವುಗಳ ಅರ್ಥ. ಅಲ್ಲಿ ದೇವರನ್ನು ಕಾಣುವ ಬದಲಿಗೆ ನನ್ನನ್ನು ಕಂಡರೆ ಅದು ಅನರ್ಥವಾಗಿಬಿಡುತ್ತದೆ. ಸಂತೃಪ್ತಿಯ ಮೂಲಕ ಬಡವನಿಗೆ ಸೌಭಾಗ್ಯ ದೊರೆಯುತ್ತದೆ. ನೀನೇ ನನ್ನ ತೃಪ್ತಿ. ಆ ತೃಪ್ತಿ ಸಿಗುವವರೆಗೂ ನನ್ನ ಆತ್ಮ ಬಡವಾಗಿಯೇ ಇರುತ್ತದೆ. ಎಲ್ಲ ದುಃಖಗಳ ಮೂಲ ಕಾರಣವೂ ಆಸೆ. ಆದ್ದರಿಂದ ನಾನು ನಿನ್ನಲ್ಲಿ ಸಾಂತ್ವನವನ್ನು ಕಂಡುಕೊಳ್ಳುತ್ತಿದ್ದೇನೆ. ಈ ಜಗತ್ತಿನಲ್ಲಿ `ನಾನು ಮುಂದೆ ನಾನು ಮುಂದೆ’ ಎಂದು ಸಹನೆಯನ್ನು ಕಳೆದುಕೊಂಡು ಉಳಿದವರನ್ನು ತುಳಿದು ಮುಂದೆ ಸಾಗುತ್ತಿರುವ ಮನುಷ್ಯರು ನನಗೆ ಕಾಣಿಸುತ್ತಿದ್ದಾರೆ. ಆದರೆ ಅತ್ಯಂತ ಸಹನೆಯಿಂದ ಈ ಎಲ್ಲವನ್ನೂ ಕರುಣೆಯ ಕಣ್ಣಿನಿಂದ ನೋಡುತ್ತಿರುವ ನಿನ್ನನ್ನು ಕಂಡಾಗ ನಾನೂ ನಿನ್ನ ಸೌಮ್ಯತೆಯನ್ನು ಪಡೆದುಕೊಳ್ಳುತ್ತೇನೆ.

ಯೇಸು: ನಿನ್ನನ್ನು ನೀನೇ ಕಂಡುಕೊಳ್ಳುವುದು ಹೇಗೆ?

ನಾನು: ಕರುಣೆ ಹುಟ್ಟುವ ಸಂದರ್ಭದ ಸೃಷ್ಟಿಗಾಗಿ ನೀನು ಹಸಿದವನಾಗಿ ಬಂದು ನನ್ನಲ್ಲಿ ಆಹಾರವನ್ನು ಕೇಳುವೆ. ಬಾಯಾರಿದವನಾಗಿ ಬಂದು ನೀರು ಕೇಳುವೆ. ರೋಗಿಯಾಗಿ ಬಂದು ಚಿಕಿತ್ಸೆಯನ್ನು ಯಾಚಿಸುವೆ. ನಗ್ನನಾಗಿ ಬಂದು ಬಟ್ಟೆಯನ್ನು ಅಪೇಕ್ಷಿಸುವೆ. ಹೊರೆ ಹೊತ್ತು ಬಂದು ಅದನ್ನು ಇಳಿಸಲು ಕೇಳಿಕೊಳ್ಳುವೆ.

ಯೇಸು: ಆಗ ನೀನೇನು ಮಾಡುತ್ತೀಯಾ?

ನಾನು: ಆಗ ನಾನು ನನ್ನನ್ನೇ ಮರೆತು ಸಕಲರಿಗೂ ಸಕಲವನ್ನೂ ನೀಡುವ ದೇವರಲ್ಲಿ ಅವನ ಅತ್ಯುತ್ತಮ ಉಪಕರಣವನ್ನಾಗಿ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.

ಯೇಸು: ನೀನು ಯಾವಾಗ ಒಳ್ಳೆಯ ಉಪಕರಣವಾಗುತ್ತೀಯಾ?

ನಾನು: ನನ್ನ ಹೃದಯದಿಂದ ಸ್ವಾರ್ಥವೆಂಬ ಅಶುದ್ಧಿಯನ್ನು ತೊಳೆದು ಸ್ವಚ್ಛಗೊಳಿಸಿದಾಗ.

ಯೇಸು: ಅದು ನಿನಗೆ ಯಾವ ಪದವಿಯನ್ನು ನೀಡುತ್ತದೆ?

ನಾನು: ದೇವಪುತ್ರನ ಪದವಿ. ಏಕೆಂದರೆ ಅದು ನನ್ನಲ್ಲೂ ಇತರರಲ್ಲೂ ಒಂದೇ ಬಗೆಯ ಶಾಂತಿಯನ್ನು ಉಂಟುಮಾಡುತ್ತದೆ.

ಯೇಸು: ದೇವರ ರಾಜ್ಯ ಎಲ್ಲಿದೆ?

ನಾನು: ಅದು ಹೃದಯದಲ್ಲೇ ಇದೆ.

ಯೇಸು: ಅದನ್ನು ಹೇಗೆ ಕಂಡುಕೊಳ್ಳುವೆ?

ನಾನು: ಜಗತ್ತಿನ ಮತ್ತೊಂದು ತುದಿಯವರೆಗೆ ಇರುವ ನನ್ನ ನೆರೆಯವರಿಗೆ ನ್ಯಾಯ ದೊರೆಯುವವರೆಗೂ ಎಲ್ಲಾ ಬಗೆಯ ಹಿಂಸೆಯನ್ನೂ ಸಹನೆಯಿಂದ ಅನುಭವಿಸುತ್ತೇನೆ ಎಂದು ಸಂತೋಷದಿಂದ ತೀರ್ಮಾನಿಸುವ ಮೂಲಕ.

ಯೇಸು: ನೀನು ಹೇಗೆ ಭೂಮಿಯ ಉಪ್ಪಾಗಿರುವೆ?

ನಾನು: ಬದುಕಿನ ಎಲ್ಲಾ ರಸಗಳನ್ನೂ ದೈವೀಕತೆ ಎಂಬ ರಸದಲ್ಲಿ ಕಂಡುಕೊಳ್ಳುವ ಮೂಲಕ.

ಯೇಸು: ನೀನು ದೇವರ ಪರಂಪರೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವವನಾದರೆ ಬೇರೆ ಬೇರೆ ಮತಗಳನ್ನೂ ಬೇರೆ ಬೇರೆ ಸಂಸ್ಕೃತಿಗಳನ್ನೂ ಹೇಗೆ ಅರ್ಥಮಾಡಿಕೊಳ್ಳುವೆ?

ನಾನು: ಒಡಂಬಡಿಕೆಗಳನ್ನೋ ದೇವರನ್ನೋ ನಾಶ ಮಾಡಲು ನೀನು ಅವತರಿಸಿಲ್ಲ. ಬದಲಿಗೆ ಅವುಗಳನ್ನು ಸಾಧಿಸಿ ತೋರಿಸುವುದಕ್ಕೋಸ್ಕರ ನೀನು ಅವತರಿಸಿದ್ದೀಯ. ನಿನ್ನ ಕರ್ತವ್ಯಕ್ಕೆ ನಾನೂ ಜತೆಯಾಗುತ್ತೇನೆ.

ಯೇಸು: `ಕೊಲಬೇಡ’ ಎಂಬ ನನ್ನ ಉಪದೇಶವನ್ನು ನೀನು ಹೇಗೆ ಗ್ರಹಿಸಿರುವೆ?

ನಾನು: ಸತ್ಯದ ಮಹತ್ವನ್ನು ಕಾಣದಿರುವುದು ಇಲ್ಲವೇ ಅದನ್ನು ನಿರಾಕರಿಸುವುದೇ ಕೊಲೆ. ಯಾವುದೋ ಕಾರಣದಿಂದ ಶರೀರವನ್ನು ತ್ಯಜಿಸಿದವರಿದ್ದರೆ ಅವರ ಮಹತ್ವವನ್ನು ಅರ್ಹ ವಿಧಾನದಲ್ಲಿ ನಾನು ಆದರಿಸುತ್ತೇನೆ.

ಯೇಸು: ವ್ಯಭಿಚಾರ ಕೂಡದು ಎಂದು ನಾನು ಹೇಳಿದಾಗ ನೀನಗೇನು ಅರ್ಥವಾಯಿತು?

ನಾನು: ಸಕಲವನ್ನೂ ಒಳಗೊಳ್ಳುವ ಪರಮಸತ್ಯವೇ ಬ್ರಹ್ಮ. ಯಾವಾಗಲೂ ಆ ಸತ್ಯ ಮಾರ್ಗದಲ್ಲಿಯೇ ಸಾಗಬೇಕು. ಈ ಹಾದಿಯನ್ನು ಬಿಟ್ಟು ನಡೆಯುವುದೇ ವ್ಯಭಿಚಾರ.

ಯೇಸು: ನಾನು ತೋರಿಸಿಕೊಟ್ಟ ಮಾರ್ಗದಲ್ಲಿ ಯಾವ ವೈಶಿಷ್ಟ್ಯವನ್ನು ನೀನು ಕಂಡೆ?

ನಾನು: ಒಂದು ಸಂದರ್ಭದಲ್ಲಿ ನೀನು ಹೇಳಿದ ವಚನವೊಂದು ನನಗೆ ನೆನಪಾಗುತ್ತಿದೆ. ಒಮ್ಮೆ ಸುಂಕದ ಕಟ್ಟೆಯಲ್ಲಿದ್ದ ಲೇವಿ ಎಂಬ ಹೆಸರಿನ ಸುಂಕ ವಸೂಲಿಗಾರನಲ್ಲಿ ನಿನ್ನನ್ನು ಹಿಂಬಾಲಿಸಲು ಹೇಳಿದೆ. ಮತ್ತೆ ಅವನ ಮನೆಯಲ್ಲಿ ನಿನಗೆ ಆತಿಥ್ಯ ನೀಡಿದಾಗ ಫರಿಸಾಯರು ಮತ್ತು ಅವರ ವೇದಜ್ಞರು ಬಂದು `ನೀವೇಕೆ ಸುಂಕ ವಸೂಲಿಗಾರರು ಮತ್ತು ಪಾಪಿಗಳ ಜತೆ ಕುಳಿತು ಉಣ್ಣುತ್ತೀರಿ?’ ಎಂದು ಪ್ರಶ್ನಿಸಿದರು. ಅಂದು ನೀನು ನೀಡಿದ ಉತ್ತರ ನನಗೀಗಲೂ ಮಾರ್ಗದರ್ಶಕವಾಗಿದೆ- `ಆರೋಗ್ಯವಿರುವವನಿಗೆ ವೈದ್ಯನ ಅಗತ್ಯವಿಲ್ಲ. ನಾನು ಬಂದದ್ದು ನೀತಿವಂತರನ್ನು ಕರೆಯುವುದಕ್ಕಾಗಿಯಲ್ಲ. ನನ್ನ ಆಗಮನದ ಉದ್ದೇಶ ಪಾಪಿಗಳನ್ನು ಪಶ್ಚಾತಾಪದ ಹಾದಿಗೆ ಆಹ್ವಾನಿಸುವುದು’.

ಇಷ್ಟಾದ ನಂತರವೂ ಅವರು ಹೇಳಿದರು-`ಯೋಹಾನನ ಶಿಷ್ಯರು ಹಲವಾರು ಬಾರಿ ಉಪವಾಸ ಪ್ರಾರ್ಥನೆಗಳಲ್ಲಿ ತೊಡಗುತ್ತಾರೆ. ಫರಿಸಾಯರ ಶಿಷ್ಯರೂ ಹಾಗೆಯೇ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಇಂಥ ಅನುಷ್ಠಾಗಳನ್ನು ನಡೆಸುವುದಿಲ್ಲವಲ್ಲ’. ಅಂದು ನೀನು ಅವರಿಗೆ ಹೇಳಿದ್ದೇನು!

‘ಮದುಮಗ ಜತೆಯಲ್ಲಿರುವಾಗ ಆತನ ಜತೆಗಾರರನ್ನು ಉಪವಾಸವಿರಿಸಲು ಸಾಧ್ಯವೇ?’ ಹೀಗೆ ನೂರಾರು ಸಂದರ್ಭಗಳಲ್ಲಿ ಸ್ಥಗಿತಗೊಂಡ ವ್ಯವಸ್ಥೆಯನ್ನು ನಿರಾಕರಿಸಿ ಉಪದೇಶಗಳನ್ನು ನೀಡಿದ್ದೀಯ. ಆಚರಣೆಗಳಿಗೆ ಸೀಮಿತವಾದ ನೈತಿಕತೆಯನ್ನು ದಾಟಿ ಮಾನವೀಯ ಅಂತಃಕರಣದ ನೈತಿಕತೆಯನ್ನು ತೋರಿಸಿಕೊಟ್ಟಿದ್ದೀಯ. ಹರಿಯುವ ನದಿಯಲ್ಲಿ ಯಾವ ಕಲ್ಮಶವೂ ಉಳಿದುಕೊಳ್ಳುವುದಿಲ್ಲ. ಹಾಗೆಯೇ ನಿನ್ನ ವಚನಗಳೆಂಬ ನದಿಯೊಳಗೆ ಬದುಕುವ ನನ್ನೊಳಗೆ ಸಂಶಯದ ಹುತ್ತ ಬೆಳೆಯುವುದಿಲ್ಲ.

ಸರ್ವ ಲೋಕಗಳಿಗೂ ಮಂಗಲವನ್ನುಂಟು ಮಾಡುವ ದೇವರ ವಚನಗಳನ್ನು ಕೇಳಿ ರೋಮಾಂಚಿತನಾಗಿ ನಾನು ಹಲ್ಲೇಲೂಯಾ ಹಾಡಿದೆ.

October 2006
M T W T F S S
 1
2345678
9101112131415
16171819202122
23242526272829
3031  
« Sep   Dec »
  • July 2024
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಅಲೆಯೂ ನೀರೂ ಎರಡಲ್ಲ ಎಂದು ಅರಿವಾದಾಗ…
  • ನನ್ನ ಬದುಕಿನ ಗುರುವಾದ ನಾರಾಯಣ ಗುರು
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಘಟನೆಗಳು
  • ಟಿಪ್ಪಣಿ
  • ನಾರಾಯಣ ಗುರು
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2026 Freedom of the present | ಈ ನಡುವಿನ ಬಿಡುವು | Powered by Superbs Personal Blog theme