
ಮಂಗಳೂರಿನಲ್ಲಿ ಜನವರಿ 23ರಂದು ಪಬ್ ಒಂದರ ಮೇಲೆ ನಡೆದ ದಾಳಿಯ ನಂತರ `ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ’ ಎಂಬ ಹೇಳಿಕೆಯೊಂದನ್ನು ಕರ್ನಾಟಕದ ಅಧಿಕಾರಾರೂಢ ರಾಜಕಾರಣಿಗಳು ಬಹಳಷ್ಟು ಬಾರಿ ನೀಡಿದ್ದಾರೆ. ಈ ಹೇಳಿಕೆಗಳನ್ನು ನೀಡಿದವರಾಗಲೀ ಅದನ್ನು ಕೇಳಿಸಿಕೊಂಡ ನಾವಾಗಲೀ `ಕಾನೂನನ್ನು ಕೈಗೆತ್ತಿಕೊಳ್ಳುವುದು’ ಎಂಬ ಪರಿಕಲ್ಪನೆಯ ಅರ್ಥವೇನು ಎಂಬ ಬಗ್ಗೆ ಯೋಚಿಸಿಲ್ಲ.
ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಒಂದು ಸರಳ ಮತ್ತು ಸಾಮಾನ್ಯ ಉದಾಹರಣೆ ಯಾವುದು? ಸಾರ್ವಜನಿಕ ಸ್ಥಳವೊಂದರಲ್ಲಿ ಜೇಬುಗಳ್ಳನೊಬ್ಬ ಮಾಲು ಸಮೇತ ಸಿಕ್ಕಿಬೀಳುವುದನ್ನು ಇಂಥದ್ದೊಂದು ಸಂದರ್ಭವೆಂದು ಪರಿಗಣಿಸಬಹುದೇನೋ. ಜೇಬುಗಳ್ಳ ಸಿಕ್ಕಿಬಿದ್ದ ತಕ್ಷಣ ಅವನನ್ನು ಹಿಡಿದವರು ಪೊಲೀಸರನ್ನು ಕರೆಯುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಅಲ್ಲಿದ್ದವರೆಲ್ಲಾ ತಮ್ಮ ಪಾಲಿನ ಶಿಕ್ಷೆಯನ್ನು ಆತನಿಗೆ ನೀಡುತ್ತಾರೆ. ಹೀಗೆ ಸಿಕ್ಕಿಬಿದ್ದವರು `ಸಾರ್ವಜನಿಕರ ಆಕ್ರೋಶ’ಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡದ್ದೂ ಇದೆ.ಜೇಬುಗಳ್ಳನನ್ನು ಪೊಲೀಸರಿಗೆ ಒಪ್ಪಿಸಿ, ಪೊಲೀಸರು ಅವನ ಮೇಲೊಂದು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಕೊಡುವುದು ಕಾನೂನು ಬದ್ಧವಾದ ಹಾದಿ. ಇದನ್ನು ಕೈಬಿಟ್ಟು ವಿಚಾರಣೆಯೇ ಇಲ್ಲದೇ ಶಿಕ್ಷೆ ನೀಡುವ `ಗುಂಪು ನ್ಯಾಯ’ವನ್ನು ಕಾನೂನು ಕೈಗೆತ್ತಿಕೊಳ್ಳುವುದರ ಉದಾಹರಣೆಯೆನ್ನಬಹುದು.
ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ಅಥವಾ ಬಸ್ ಅಥವಾ ಸಾರ್ವಜನಿಕ ಪ್ರದೇಶವೊಂದರಲ್ಲಿ ಹುಡುಗ-ಹುಡುಗಿಯರು ಮಾತನಾಡುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದಾಗಲೀ ಕಾನೂನನನ್ನು ಕೈಗೆತ್ತಿಕೊಳ್ಳುವ ಕ್ರಿಯೆಯೆಂದು ಹೇಗೆ ಹೇಳುವುದು? ಪಬ್ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಿಗೆ ಮದ್ಯವನ್ನು ಸರಬರಾಜು ಮಾಡುವುದನ್ನೂ ಕಾನೂನು ಬಾಹಿರ ಎನ್ನುವಂತಿಲ್ಲ. ವಯಸ್ಕ ಹುಡುಗ ಮತ್ತು ಹುಡುಗಿಯರು ಒಟ್ಟಿಗೆ ಕುಳಿತು ಮದ್ಯ ಸೇವಿಸುವುದನ್ನೂ ಕಾನೂನು ನಿಷೇಧಿಸಿಲ್ಲ. ಹಾಗಿರುವಾಗ ಈ ದಾಳಿಯನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ಹೇಳಲು ಸಾಧ್ಯವೇ? ಹೀಗೆ ದಾಳಿ ನಡೆಸಿ ಹಲ್ಲೆ ಮಾಡಿದರೆ ಅದು ಕಾನೂನಿನ ಉಲ್ಲಂಘನೆಯಷ್ಟೇ ಆಗಲು ಸಾಧ್ಯ. ಭಿನ್ನ ಧರ್ಮದವರು ಅಥವಾ ಜಾತಿಯವರು ಪರಸ್ಪರ ಮಾತನಾಡಬಾರದು, ಗೆಳೆಯರಾಗಬಾರದು ಎಂಬ ಯಾವ ನಿಯಮಗಳೂ ಭಾರತದಲ್ಲಿ ಇಲ್ಲ. ಇದನ್ನು ಯಾವುದಾದರೂ ಗುಂಪು ಅಥವಾ ಸಂಘಟನೆ ವಿರೋಧಿಸಿದರೆ ಅದನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಹೇಳುವುದು ಸರಿಯೇ?